ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ವಿಚಾರ ಸಂಕಿರಣದ ನೇತೃತ್ವ ವಹಿಸಿ ಮಾತನಾಡಿ, ‘ಶ್ರೇಷ್ಠ ಆರ್ಥಿಕ ತಜ್ಞ, ಚಿಂತಕ ಪ್ರೊ.ಡಿ.ಎಂ.ನಂಜುಂಡಪ್ಪ ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳು ಗ್ರಾಮದಲ್ಲಿ ಜನಿಸಿದ್ದರು. ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಆರ್ಥಿಕ ಸುಧಾರಣೆಗಳನ್ನು ತರಲು ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಈಗಲೂ ಭೌಗೋಳಿಕವಾಗಿ ಆರ್ಥಿಕ ಅಸಮಾನತೆ ಇರುವುದು ಕಳವಳಕಾರಿ ಸಂಗತಿ. ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗಿದ್ದು, ಪ್ರಾಣಿ, ಪಕ್ಷಿ ಸಂಕುಲವೂ ಕಣ್ಮರೆಯಾಗುತ್ತಿದೆ. ಪರಿಸರ ಕೂಡ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಕಾಡು, ನದಿ, ವೃಕ್ಷಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ’ ಎಂದರು.