ಬೆಂಗಳೂರು: ಬೆಂಗಳೂರು ನಗರದಲ್ಲಿ ಪಕ್ಷವು 10 ರಿಂದ 15 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಪಕ್ಷಗಳ ನಾಯಕರ ಸೇರ್ಪಡೆ ಬಳಿಕ ಮಾತನಾಡಿದ ಅವರು, ‘ಪ್ರಭಾವಿ ನಾಯಕರು ಪಕ್ಷವನ್ನು ಸೇರಿರುವುದರಿಂದ ಹೆಚ್ಚಿನ ಬಲ ಬಂದಿದೆ. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಒಡಕುಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ನಾನು ದೈವದಲ್ಲಿ ನಂಬಿಕೆ ಇಟ್ಟವನು. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ದಿನೇ ದಿನೇ ಪಕ್ಷದ ಶಕ್ತಿ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಇತರ ಪಕ್ಷಗಳ ಮುಖಂಡರೂ ಜೆಡಿಎಸ್ ಸೇರಲಿದ್ದಾರೆ’ ಎಂದರು.
‘ರಾಜ್ಯದಲ್ಲಿ ಅತ್ಯಂತ ಕೀಳುಮಟ್ಟದ ಆಡಳಿತದ ಕಾರಣಕ್ಕೆ ಜನತೆ ಬೇಸರಗೊಂಡಿದ್ದಾರೆ. ನಾವು ಅಧಿಕಾರಕ್ಕೆ ಬಂದರೂ ಇವೆಲ್ಲವನ್ನು ಸರಿಪಡಿಸಲು ಒಂದು ವರ್ಷವಾದರೂ ಬೇಕಾಗುತ್ತದೆ. ಕಾಲ ಕಾಲಕ್ಕೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತೇನೆ’ ಎಂದು ದೇವೇಗೌಡ ಹೇಳಿದರು.
ಜಿ.ಎಚ್.ರಾಮಚಂದ್ರ ಬಿಜೆಪಿಯಿಂದ ಸೇರ್ಪಡೆಗೊಂಡ ವೇಳೆ ಅವರ ಸೊಸೆ, ನಟಿ ಅಮೂಲ್ಯ ಹಾಜರಿದ್ದರು. ‘ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮಾವನ ಪರವಾಗಿ ಪ್ರಚಾರ ನಡೆಸುತ್ತೇನೆ. ಆದರೆ, ರಾಜ್ಯದಾದ್ಯಂತ ಪ್ರಚಾರ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ’ ಎಂದು ಅಮೂಲ್ಯ ಹೇಳಿದರು.