ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಆವರಣದಲ್ಲಿ ಗ್ರಾಮದರ್ಶನ!

₨1.5 ಲಕ್ಷ ವೆಚ್ಚದಲ್ಲಿ ಕಲಾಕೃತಿಗಳ ನಿರ್ಮಾಣ; ಹಸಿರೀಕರಣಕ್ಕೆ ಆದ್ಯತೆ
Last Updated 7 ಮೇ 2018, 11:15 IST
ಅಕ್ಷರ ಗಾತ್ರ

ಗದಗ: ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನ, ರಾಶಿ ಮಾಡುತ್ತಿರುವ ರೈತರು, ಧಾನ್ಯಗಳನ್ನು ಮಾರಾಟ ಮಾಡಲು ಹೊರಟ ರೈತರು, ಎತ್ತಿನ ಬಂಡಿಯ ಗಾಲಿಯ ಸದ್ದು, ಇದೆಲ್ಲಾ ಮೇಳೈಸಿ ಅಪ್ಪಟ ಗ್ರಾಮೀಣ ಸೊಗಡಿನ ದರ್ಶನ ಮಾಡಿಸುವ ವಾತಾವರಣ ಗದುಗಿನ ಎಪಿಎಂಸಿ ಕಚೇರಿ ಎದುರು ಪುಟ್ಟ ಉದ್ಯಾನದಲ್ಲಿ ತಲೆಯೆತ್ತಿದೆ.

ಎಪಿಎಂಸಿ ಕಚೇರಿ ಎದುರಿನ ಉದ್ಯಾನದಲ್ಲಿ ಹುಲ್ಲು ಹಾಸು, ಹಲವು ಪ್ರಕಾರ ಹೂವಿನ ಸಸಿಗಳು ಹಾಗೂ ವಿವಿಧ ಬಗೆಯ ಗಿಡಗಳನ್ನು ಬೆಳೆಸಲಾಗಿದೆ. ಉದ್ಯಾನದ ಉತ್ತರ ದಿಕ್ಕಿನ ಪ್ರದೇಶದಲ್ಲಿ ಗ್ರಾಮೀಣ ಜನ ಜೀವನದ ದರ್ಶನ ಮಾಡಿಸುವ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ರೈತನೊಬ್ಬ ಕಣದಲ್ಲಿ ನಿಂತು ಕಾಳಿನಿಂದ ಕಸಕಡ್ಡಿ ಬೇರ್ಪಡಿಸುತ್ತಿರುವುದು, ಮಹಿಳೆಯೊಬ್ಬರು ಈ ಧಾನ್ಯಗಳನ್ನು ಒಂದೆಡೆ ಗುಡ್ಡೆ ಹಾಕಿ, ರಾಶಿ ಮಾಡುವ ಕಾರ್ಯದಲ್ಲಿ ನಿರತರಾಗಿರುವ ದೃಶ್ಯಗಳು ಕಣ್ಣಿಗೆ ಮನೋಹರ ಹಾಗೂ ಮನಸ್ಸಿಗೆ ಮುದ ನೀಡುತ್ತವೆ. ಎತ್ತು, ಚಕ್ಕಡಿ ಸೇರಿದಂತೆ ಒಟ್ಟು 7 ಕಲಾಕೃತಿಗಳು ನಿರ್ಮಿಸಲಾಗಿದೆ. 2 ತಿಂಗಳ ಅವಧಿಯಲ್ಲಿ ಅಂದಾಜು ₹1.5 ವೆಚ್ಚದಲ್ಲಿ ಈ ಸಿಮೆಂಟ್‌ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ.

ಬೆಂಚುಗಳ ಅಳವಡಿಕೆ: ಎಪಿಎಂಸಿ ಆವರಣದಲ್ಲಿ ಸದಾ ಜನದಟ್ಟಣ ಇರುತ್ತದೆ. ಜಿಲ್ಲೆಯ ವಿವಿಧ ಭಾಗಗಳಿಂದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುವ ರೈತರಿಗೆ, ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ, ನೆರಳು ಇರುವ ಪ್ರದೇಶದಲ್ಲಿ ಬೆಂಚ್‌ಗಳನ್ನು ಅಳವಡಿಕೆ ಮಾಡಲಾಗಿದೆ.

ಆವರಣದಲ್ಲಿ 20ಕ್ಕೂ ಹೆಚ್ಚು ಇಂತಹ ಆಸನಗಳನ್ನು ಅಳವಡಿಸಲಾಗಿದೆ. ವ್ಯಾಪಾರಿಗಳು, ರೈತರು, ಕೂಲಿ ಕಾರ್ಮಿಕರು ಹಾಗೂ ವಾಯುವ ವಿಹಾರಿಗಳು ತಮಗೆ ಆಯಾಸವಾದಾಗ ಈ ಆಸನಗಳಲ್ಲಿ ಕೆಲ ಹೊತ್ತು ಕಳಿತುಕೊಳ್ಳುತ್ತಾರೆ. ದಣಿವಾರಿಸಿಕೊಂಡು ಮತ್ತೆ ತಮ್ಮ ಕೆಲಸಗಳಿಗೆ ಹೊರಡುತ್ತಾರೆ.

‘ಎಪಿಎಂಸಿ ಕಚೇರಿ ಎದುರಿಗೆ ಇದ್ದ ಗಿಡಗಳನ್ನು ಕಡಿದು ಹಾಕಲಾಗಿದೆ ಎಂದು ಅನೇಕರು ಆರೋಪ ಮಾಡಿದರು. ಆದರೆ, ಕೆಲವು ಆಲಂಕಾರಿಕ ಗಿಡಗಳು ತುಂಬ ಎತ್ತರಕ್ಕೆ ಬೆಳೆದಿದ್ದವು. ಗಿಡಗಳ ಮರೆಯಲ್ಲಿ ಕಚೇರಿ ಕಾಣುತ್ತಿರಲಿಲ್ಲ. ಹೀಗಾಗಿ ಈ ಗಿಡಗಳನ್ನು ಮಧ್ಯಭಾಗದಿಂದ ಕಡಿದು ಹಾಕಲಾಗಿತ್ತು. ಈ ಮತ್ತೆ ಈ ಗಿಡಗಳಲ್ಲಿ ಚಿಗುರೆಲೆ ಮೂಡಿದೆ. ಉದ್ಯಾನ ಹಸಿರುಮಯವಾಗಿದೆ’ ಎಂದು ಎಪಿಎಂಸಿ ಉಪಾಧ್ಯಕ್ಷ ನಿಂಗನಗೌಡ ಹಿರೇಮನಿಪಾಟೀಲ ಹೇಳಿದರು.

‘ಇ–ಟೆಂಡರ್‌ ಪ್ರಕ್ರಿಯೆ ಆರಂಭವಾದಾಗಿನಿಂದ ಇಲ್ಲಿನ ಟೆಂಡರ್‌ ಹಾಲ್‌ನಲ್ಲಿ ಇದ್ದ ಕಟ್ಟಿಗೆ ಆಸನಗಳು ಬಳಕೆ ಆಗುತ್ತಿರಲಿಲ್ಲ. ಅವುಗಳನ್ನು ದುರಸ್ತಿಗೊಳಿಸಿ, ಬಣ್ಣ ಬಳಿದು ಸದ್ಯ 20ಕ್ಕೂ ಹೆಚ್ಚು ಆಸನಗಳನ್ನು ಎಪಿಎಂಸಿ ಆವರಣದಲ್ಲಿ ಅಳವಡಿಸಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನೂ 20 ಆಸನಗಳನ್ನು ಹಾಕಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
**
ಎಪಿಎಂಸಿ ಆವರಣದಲ್ಲಿನ ಸಿಮೆಂಟ್‌ ಕಲಾಕೃತಿಗಳು ಮನಸ್ಸಿಗೆ ಮುದ ನೀಡುತ್ತಿವೆ. ಜನರ ವಿಶ್ರಾಂತಿಗಾಗಿ ಅಲ್ಲಲ್ಲಿ,ಮರಗಳ ಕೆಳಗೆ ಆಸನ ವ್ಯವಸ್ಥೆ ಮಾಡಿರುವುದು ಅನುಕೂಲವಾಗಿದೆ
- ಅಜಯ್ ಎಂ.ಕೆ.,ಗದಗ ನಿವಾಸಿ 

ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT