ಅಡುಗೆಗೆ ಒಗ್ಗರಣೆ ಹೇಗೆ ಸ್ವಾದ ಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತವೆ. ಈ ಸಣ್ಣ ವಿಷಯಗಳಿಗೆ ಒತ್ತುಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿ ಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುಧೇಂದ್ರ ಅವರ ‘ಮಿಥುನ’ ಕಥಾ ಸಂಕಲನ. ಇದು ಶ್ರೀರಮಣರ ತೆಲುಗಿನ ಕಥೆಗಳಿಂದ ಪ್ರೇರೇಪಿತವಾಗಿದೆ.
ಯಾವುದೇ ಆತಿರೇಖಗಳಿಲ್ಲದ ತಿಳಿಯ ಅನುಭವಗಳನ್ನು ನೀಡುವ ನಾಲ್ಕೈದು ಕಥೆಗಳನ್ನು ರಂಗರೂಪಕ್ಕೆ ತರುವ ಪ್ರಯತ್ನ ಇಲ್ಲಿ ನಡೆದಿದೆ. ಒಬ್ಬ ಮನುಷ್ಯನ ಜೀವನಶೈಲಿ, ಕಟ್ಟುಕಥೆಯಂತೆ ಕಾಣುವ ಒಂದು ಘಟನೆ, ಬಾಲ್ಯದ ತೀರದ ಆಸೆ, ಬದುಕು ಕಟ್ಟುವರೀತಿ ಈ ನಾಟಕದ ಹೂರಣ. ಈ ಕಥೆಗಳ ವಿಶೇಷವೆಂದರೆ ಯಾವುದೇ ತಾರ್ಕಿಕ ಚೌಕಟ್ಟುಗಳಿಗೆ ಒಳಪಡದೆ, ಸಾಮಾನ್ಯ ವ್ಯಕ್ತಿಯ ಬದುಕಿನ ಸೂಕ್ಷ್ಮಗಳನ್ನು ಎತ್ತಿಹಿಡಿದು ಗೌರವಿಸುವ ಪ್ರಯತ್ನ.‘ನೆಮ್ಮದಿಯ ಜೀವನವು ಒಂದು ಸಾಧನೆ’ ಎಂದು ಬಿಂಬಿಸುವ ಇಚ್ಚೆ.
ಲೇಖಕರ ಪರಿಚಯ: ವಸುಧೇಂದ್ರ ಕನ್ನಡದ ಇತ್ತೀಚಿನ ಬರಹಗಾರರಲ್ಲಿ ಪ್ರಮುಖರು. ತಮ್ಮ ಸಣ್ಣಕತೆಗಳಿಂದ ಪ್ರಸಿದ್ಧರಾದ ವಸುಧೇಂದ್ರ ಅವರು ತಮ್ಮ ಕತೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸಹೊಸ ವಿಷಯಗಳನ್ನು ಕುರಿತಾದ ಕತೆ, ಕಾದಂಬರಿ, ಪ್ರಬಂಧ, ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
ನಿರ್ದೇಶಕರ ವಿವರ: ಶಂಕರ್ ಗಣೇಶ್ 11 ವರುಷಗಳಿಂದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಬೆನಕ’ ತಂಡದ ನೇಪಥ್ಯ ಕೆಲಸಗಳಲ್ಲಿ ಶುರುವಾದ ರಂಗಭೂಮಿ ನಂಟು, ರಂಗಶಂಕರ, ಸಂಚಯ ಮುಂತಾದ ತಂಡಗಳ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಯಲ್ಲಿ ಪರಿಚಿತರು.
‘ಪೋಲಿಕಿಟ್ಟಿ’, ‘ರೋಮಿಯೋ ಲವ್ಸ್ ಅನಾರ್ಕಲಿ’ ಮತ್ತು ‘ಮಾವಿನಗುಡಿ ಕಾಲೋನಿ’ ಇವರ ನಿರ್ದೇಶನದ ನಾಟಕಗಳು. ರಂಗಭೂಮಿಯಷ್ಟೇ ಅಲ್ಲ ಕಿರುತೆರೆ, ಸಿನಿಮಾಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಹಾಗೂ ಹಲವು ಸಿನಿಮಾ ಮತ್ತು ಜಾಹೀರಾತಿನ ತೆರೆಮರೆಯ ಕೆಲಸಗಳನ್ನು ನಿರ್ವಹಿಸಿದ್ದಾರೆ.
**
‘ಸಿಂಹಾಚಲಂ ಸಂಪಿಗೆ’ ನಾಟಕ ಪ್ರದರ್ಶನ: ಪ್ರಸ್ತುತಿ–ಯುವಶ್ರೀ, ರಚನೆ–ವಸುಧೇಂದ್ರ, ರಂಗರೂಪ ಮತ್ತು ನಿರ್ದೇಶನ–ಶಂಕರ ಗಣೇಶ್. ಸ್ಥಳ–ರಂಗಶಂಕರ, ಜೆ.ಪಿ.ನಗರ, ರಾತ್ರಿ 7.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.