ಹಂಗಾಮಿ ಸ್ಪೀಕರ್, ಬಿಜೆಪಿ ಶಾಸಕರಿಂದ ರಾಷ್ಟ್ರಗೀತೆಗೆ ಅಗೌರವ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿ, ಬಿಜೆಪಿ ನೇತೃತ್ವದ ಸರ್ಕಾರ ಪತನಗೊಳ್ಳುತ್ತಿದ್ದಂತೆ ಪಕ್ಷದ ಶಾಸಕರು ಮತ್ತು ಹಂಗಾಮಿ ಸ್ಪೀಕರ್ ರಾಷ್ಟ್ರಗೀತೆಗೂ ಗೌರವ ನೀಡದೆ ನಿರ್ಗಮಿಸಿದರು.
ಯಡಿಯೂರಪ್ಪ ವಿದಾಯ ಭಾಷಣ ಮುಗಿಸಿ ಹೊರಡುತ್ತಿದ್ದಂತೆ ಅವರ ಹಿಂದೆಯೇ ಹೊರಟ ಬಿಜೆಪಿ ಶಾಸಕರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ‘ಶೇಮ್ ಶೇಮ್’ ಎಂದು ಛೇಡಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸಹ ‘ಹೋಗಿ... ಹೋಗಿ...’ ಎಂದು ಬಿಜೆಪಿ ಶಾಸಕರನ್ನು ಮೂದಲಿಸಿದರು.
ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಕೆ.ಜಿ.ಬೋಪಯ್ಯ ರಾಷ್ಟ್ರಗೀತೆ ಮೊಳಗುವ ಮೊದಲೇ ಪೀಠದಿಂದ ನಿರ್ಗಮಿಸಿದರು. ಶಾಸಕ ಎಂ.ಬಿ.ಪಾಟೀಲ ‘ಕನಿಷ್ಠ ಪಕ್ಷ ರಾಷ್ಟ್ರಗೀತೆಗಾದರೂ ಗೌರವ ಕೊಡಿ’ ಎಂದರೂ ಅವರು ಕಿವಿ ಮೇಲೆ ಹಾಕಿಕೊಳ್ಳದೆ ಹೋದರು. ರಾಷ್ಟ್ರಗೀತೆ ಮುಗಿಯುವವರೆಗೂ ಬಿಜೆಪಿಯ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಸದನದಲ್ಲಿ ನಿಂತಿದ್ದರು.
ರಾಷ್ಟ್ರಗೀತೆ ಮೊಳಗುತ್ತಿರುವಾಗಲೇ ಮಾರ್ಷಲ್ಗಳು ಬೋಪಯ್ಯ ಅವರನ್ನು ವಾಪಸ್ ಕರೆದುಕೊಂಡು ಬಂದರು. ಪೀಠದ ಹಿಂದೆಯೇ ನಿಂತುಕೊಂಡ ಬೋಪಯ್ಯ, ರಾಷ್ಟ್ರಗೀತೆ ಮುಗಿದ ನಂತರ ಅಲ್ಲಿಂದ ಹೊರಟರು.
‘ಆಡಳಿತ ಪಕ್ಷದವರು ಸರ್ಕಾರಕ್ಕೆ ಸೋಲಾಗುತ್ತಿದ್ದಂತೆ ರಾಷ್ಟ್ರಗೀತೆಗೂ ಗೌರವ ನೀಡದೆ ಹೋದರು. ರಾಷ್ಟ್ರಗೀತೆಗೆ ಬಿಜೆಪಿಯವರು ಎಷ್ಟು ಗೌರವ ಕೊಡುತ್ತಾರೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಕನಿಷ್ಠ ಪಕ್ಷ ಸ್ಪೀಕರ್ ಕೂಡ ಪೀಠದಲ್ಲಿ ಇರಲಿಲ್ಲ’ ಎಂದು ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಕಿಡಿಕಾರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.