ಬೆಂಗಳೂರು, ಮೇ 20– ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಜವಾಬ್ದಾರಿಯುಳ್ಳ ಅಧಿಕಾರ ಸ್ಥಾನದಲ್ಲಿ ಇರುವ ಅರ್ಹತೆಯನ್ನು ಪ್ರಶ್ನಿಸಿ 10 ಮಂದಿ ಕಾಂಗ್ರೆಸ್ ಶಾಸಕರು ಹೈಕಮಾಂಡಿಗೆ ಮನವಿಯನ್ನು ಕಳುಹಿಸಿದ್ದಾರೆ.
ಅರ್ಹತೆಯನ್ನು ಪ್ರಶ್ನಿಸಿ ನೀಡಿರುವ ಎರಡು ಕಾರಣಗಳು ‘ಯಾವ ಸ್ಪರ್ಧಿಯನ್ನೇ ಆಗಲಿ ಅನರ್ಹರನ್ನಾಗಿ ಮಾಡುವ ಕಾರಣಗಳಲ್ಲ’ ಎಂದು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ರಾತ್ರಿ ವರದಿಗಾರರಿಗೆ ತಿಳಿಸಿದರು.
**
ಮುಂಬೈನಲ್ಲಿ ಶಿವಸೇನೆ ಹಲ್ಲೆ
ಮುಂಬೈ, ಮೇ 20– ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬನ ಮೇಲೆ ಹಲ್ಲೆ ನಡೆಸಿದ ಗುಂಪಿನಿಂದ ಆತನನ್ನು ಪಾರು ಮಾಡಲು ಪೊಲೀಸರು ದಕ್ಷಿಣ ಮುಂಬೈ ಪ್ರದೇಶದಲ್ಲಿ ಯತ್ನಿಸಿದಾಗ ಒಬ್ಬ ಪೊಲೀಸ್ ಗಾಯಗೊಂಡ.
ಶಿವಸೇನೆಯವರು ಬೃಹತ್ ಮೆರವಣಿಗೆಯಲ್ಲಿ ಮುಂಬೈ ಕೋಟೆ ಪ್ರದೇಶದಲ್ಲಿ ಹೋಗುತ್ತಿದ್ದಂತೆ ಈ ಘಟನೆ ನಡೆಯಿತು.
**
ಬಸ್ಸುಗಳಲ್ಲಿ ‘ಫೋಟೋಸೆಲ್’
ಬೆಂಗಳೂರು, ಮೇ 20– ಕಂಡಕ್ಟರುಗಳು ಪ್ರಯಾಣಿಕರಿಗೆ ಟಿಕೇಟುಗಳನ್ನು ಕೊಡದ ಪರಿಣಾಮವಾಗಿ, ಆದಾಯ ಸೋರಿ ಹೋಗುವುದನ್ನು ತಪ್ಪಿಸಲು, ಏರಿ ಇಳಿಯುವ ಪ್ರಯಾಣಿಕರ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುವ ಸ್ವಯಂಚಾಲಿತ ‘ಫೋಟೋಸೆಲ್’ ಉಪಕರಣವನ್ನು ಬಸ್ಸುಗಳಲ್ಲಿ ಇಡುವ ನವೀನ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸಾರಿಗೆ ಸಂಸ್ಥೆಯು ನಿರ್ಧರಿಸಿದೆ.
**
27 ರಂದು ತೀರ್ಥಹಳ್ಳಿಯಲ್ಲಿ ಗೋಪಾಲಗೌಡರ ಸತ್ಯಾಗ್ರಹ
ಬೆಂಗಳೂರು, ಮೇ 20– ಶಿವಮೊಗ್ಗ ಜಿಲ್ಲೆ ಮತ್ತಿತರ ಕೆಲವು ಕಡೆಗಳಲ್ಲಿ ರಾಜ್ಯದ ಸಂಯುಕ್ತ ಸೋಷಲಿಸ್ಟ್ ಪಾರ್ಟಿಯು ನಡೆಸುತ್ತಿರುವ ‘ಸವಿನಯ ಕಾಯಿದೆಭಂಗ ಚಳವಳಿ’ಯನ್ನು ಇದೇ ವಾರದಲ್ಲಿ ಮೈಸೂರು, ಗುಲ್ಬರ್ಗ, ಬಳ್ಳಾರಿ, ಧಾರವಾಡ ಮತ್ತು ಬೆಂಗಳೂರು ಜಿಲ್ಲೆಗಳಿಗೆ ವಿಸ್ತರಿಸಲಿದೆ.