ತಿಪ್ಪಸಂದ್ರ(ಮಾಗಡಿ): ವರದೋಹಳ್ಳಿ ಕೆರೆ ತುಂಬಿ ಕೋಡಿ ಹರಿದಿದೆ. ಕೆರೆಯ ಏರಿಯ ಎರಡು ಕಡೆಗಳಲ್ಲಿ 10 ವರ್ಷಗಳಿಂದ ಬೆಳೆದಿರುವ ಗಿಡಮರಗಳು ಅಪಾಯಕಾರಿಯಾಗಿವೆ.
ಕೆರೆಯ ಏರಿಯಲ್ಲಿ ಗಿಡಮರಗಳ ಬೇರುಗಳು ಬೆಳೆದು, ಏರಿಯಲ್ಲಿ ಬಿರುಕು ಉಂಟಾಗಿ ಕೆರೆಯಲ್ಲಿ ಸಂಗ್ರಹವಾಗಿರುವ ಮಳೆಯ ನೀರು ಸೋರಿ ಪೋಲಾಗುತ್ತಿದೆ ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ತಿಳಿಸಿದ್ದಾರೆ.
ಕೆರೆಯಲ್ಲಿನ ಜಾಲಿಯ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದನ್ನು ವೀಕ್ಷಿಸಲು ಭೇಟಿ ನೀಡಿದ ಅಲ್ಲಿನ ಸ್ಥಿತಿಗತಿಯನ್ನು ಗಮನಿಸಿದ ನಂತರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು. ಕೆರೆಯ ಒಳಗೆ ಜಾಲಿಯ ಮರಗಳನ್ನು ಬೆಳೆಸಲಾಗಿದೆ.
ಏರಿಯನ್ನು ದುರಸ್ತಿ ಮಾಡದ ಕಾರಣ ಏರಿಯ ಎರಡು ಬದಿಗಳಲ್ಲಿ ಗಿಡಮರಗಳು ಹೆಮ್ಮರವಾಗಿ ಬೆಳೆದಿವೆ. ಅವುಗಳ ಬೇರುಗಳ ಏರಿಯಲ್ಲಿ ಬಿರುಕು ಉಂಟು ಮಾಡಿವೆ ಎಂದು ಲೋಕೇಶ್ ತಿಳಿಸಿದ್ದಾರೆ.
‘ಮಳೆಯ ನೀರನ್ನು ಸಂಗ್ರಹ ಮಾಡಲು ಪುರಾತನ ಕಾಲದಲ್ಲಿಯೇ ನಮ್ಮ ಪೂರ್ವಿಕರು ಕೆರೆ ಗೋಕಟ್ಟೆ, ಕಲ್ಯಾಣಿಗಳನ್ನು ಕಟ್ಟಿಸಿದ್ದಾರೆ. ದುರಂತ ಎಂದರೆ ನಾವು ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ’ ಎಂದಿದ್ದಾರೆ.
ಗ್ರಾಮದಲ್ಲಿ ಶೌಚಾಲಯಗಳಿಲ್ಲದ ಕಾರಣ ಕೆರೆಯ ಏರಿಯ ಮೇಲೆ ಬಯಲು ಬಹಿರ್ದೆಸೆಯ ತಾಣ ಮಾಡಿಕೊಂಡಿದ್ದು, ಕೆರೆಯ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕನಿಷ್ಠ ಮಳೆಗಾಲದಲ್ಲಿ ಆದರೂ ಕೆರೆಗಳ ಸ್ಥಿಗತಿಗಳತ್ತ ಗಮನ ಹರಿಸಬೇಕಿದೆ ಎಂದಿದ್ದಾರೆ.
ಕೆರೆ ಒಡೆದು ಅನಾಹುತ ಸಂಭವಿಸಿದಾಗ ಭೇಟಿ ಕೊಡುವ ಬದಲು ಮೊದಲೇ ಕೆರೆಗಳಿಗೆ ಅಧಿಕಾರಿಗಳು ಭೇಟಿ ನೀಡುವಂತೆ ಆಗ್ರಹಪಡಿಸಿದ್ದಾರೆ. ವರದೋಹಳ್ಳಿ ಗ್ರಾಮದ ಮುಖಂಡರಾದ ತಿಮ್ಮಯ್ಯ, ಗಂಗಣ್ಣ ಹಾಗೂ ರೈತರು ಇದ್ದರು.