ನವದೆಹಲಿ: ನಿಗದಿತ ರಾಯಧನ ಪಾವತಿ ಹಾಗೂ ಅರಣ್ಯ ಮತ್ತು ಪರಿಸರ ಪರವಾನಗಿ ಪಡೆಯುವ ಮೂಲಕ ಗಣಿಗಾರಿಕೆ ನಡೆಸಲು ಕರ್ನಾಟಕ ಮೂಲದ ದೊಡ್ಡಣ್ಣವರ್ ಬ್ರದರ್ಸ್ ಗಣಿ ಕಂಪನಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಒಪ್ಪಿಗೆ ನೀಡಿದೆ.
ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡಲ್ಲಿ ಗಣಿಗಾರಿಕೆ ನಡೆಸಲು ಯಾವುದೇ ಅಭ್ಯಂತರವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಹಾಗೂ ಮೋಹನ ಶಾಂತನಗೌಡರ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ತಿಳಿಸಿದೆ.
ಕಂಪನಿಯು ಅರಣ್ಯ ಮತ್ತು ಪರಿಸರ ಪರವಾನಗಿ ಹೊಂದಿಲ್ಲ ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ತಿಳಿಸಿದ
ರಾದರೂ, ಈ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ನ್ಯಾಯ ಪೀಠ ಸ್ಪಷ್ಟಪಡಿಸಿತು.
ಗಣಿಗಾರಿಕೆ ನಡೆಸಲು ಅಗತ್ಯವಿರುವ ಶೇಕಡ 25ರಷ್ಟು ರಾಯಧನವನ್ನು 2016ರ ಜೂನ್ನಲ್ಲೇ ಪಾವತಿಸಲಾಗಿದೆ. ಇನ್ನುಳಿದ ಶೇಕಡ 75ರಷ್ಟು ರಾಯಧನವನ್ನು ನಾಲ್ಕು ವಾರಗಳೊಳಗೆ ಪಾವತಿಸಲಾಗುವುದು ಎಂದು ಕಂಪನಿ ಪರ ವಕೀಲ ಬಸವಪ್ರಭು ಪಾಟೀಲ ತಿಳಿಸಿದರು.
ಅರಣ್ಯ ಅಧಿಕಾರಿಗಳಿಗೆ ಮುಚ್ಚಳಿಕೆ ಬರೆದುಕೊಡುವ ಮೂಲಕ ನಿಗದಿತ ಅವಧಿಯೊಳಗೆ ರಾಯಧನ ಪಾವತಿಸಲು ಗಣಿ ಕಂಪನಿಗೆ ಅವಕಾಶ ಕಲ್ಪಿಸಿದ ಪೀಠವು, ಪ್ರಕರಣದ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿತು.
ಗಣಿಯಿಂದ ಹೊರ ತೆಗೆಯಲಾದ ಅದಿರನ್ನು ಅರಣ್ಯ ಪ್ರದೇಶದ ಮೂಲಕ ಸಾಗಿಸಲು ಅವಕಾಶ ನೀಡುವುದರ ಜತೆಗೆ ಗಣಿಗಾರಿಕೆ ಪುನಾರಂಭಿಸಲು ರಾಜ್ಯ ಹೈಕೋರ್ಟ್ 2016ರ ಆಗಸ್ಟ್ 31ರಂದು ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಮುಖ್ಯಾಂಶಗಳು
* ನಿಗದಿತ ರಾಯಧನ ಪಾವತಿಸಲು ಅವಕಾಶ
* ಪ್ರಕರಣದ ವಿಚಾರಣೆ ಜುಲೈ 6ಕ್ಕೆ ಮುಂದೂಡಿಕೆ
* 2016ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ