ಬಳ್ಳಾರಿ: ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ, ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮಿಜಿ ಆಗ್ರಹಿಸಿದರು.
ಸಮುದಾಯವನ್ನು ಈಗಾಗಲೇ 18 ರಾಜ್ಯಗಳಲ್ಲಿ ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಅದರಂತೆ ರಾಜ್ಯ ಸರ್ಕಾರ ಕೂಡ ಪ್ರೊ.ಅನ್ನಪೂರ್ಣಮ್ಮ ಅವರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಶೀಘ್ರ ಎಸ್ಸಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದುಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ಮಡಿವಾಳರ ಕುಲಕಸುಬಿಗೆ ಅನುಕೂಲಕ್ಕಾಗಿ ಕುಟಿರ ಸ್ಥಾಪಿಸಿ ಉಚಿತ ವಿದ್ಯುತ್ ನೀಡಬೇಕು. ರಾಜ್ಯದಲ್ಲಿರುವ ಮಾಚಿದೇವರ ಸ್ಮಾರಕಗಳನ್ನು ಸರ್ಕಾರವು ತನ್ನ ಸ್ವಾಧೀನಕ್ಕೆ ಪಡೆದು ಅವುಗಳ ಅಭಿವೃದ್ಧಿಗಾಗಿ ಮಾಚಿದೇವ ಸ್ಮಾರಕಗಳ ಅಭಿವೃದ್ಧಿ ಪ್ರಾಧೀಕಾರ ರಚಿಸಬೇಕು. ರಾಜ್ಯದ ಒಂದು ವಿಶ್ವವಿದ್ಯಾಲಯಕ್ಕೆ ಮಾಚಿದೇವರ ಹೆಸರಿಡಬೇಕು. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ನಿವೇಶನ ನೀಡಿ, ಉಚಿತ ವಸತಿ ನಿಲಯ ಹಾಗೂ ಪ್ರಸಾದ ನಿಲಯಗಳನ್ನು ನಿರ್ಮಿಸಬೇಕು. ವಿಧಾನಪರಿಷತ್ತಿನಲ್ಲಿ ಸಮುದಾಯಕ್ಕೆ ಕಾಯಂ ಆಗಿ ಒಂದು ಸ್ಥಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನ ಜ. 5, 6 ರಂದು : ಮಾಚಿದೇವ ಸಂಸ್ಥಾನ ಮಠದ ಶಂಕುಸ್ಥಾಪನೆ ದಶಮಾನೋತ್ಸವ, ಸ್ವಾಮೀಜಿ ಜಂಗಮ ದೀಕ್ಷಾ 20ನೇ ವಸಂತೋತ್ಸವ ಹಾಗೂ 35ನೇ ಜಯಂತ್ಯುತ್ಸವದಂದು ಬಸವ ಮಾಚಿದೇವ ಸ್ವಾಮಿ ಪಟ್ಟಾಧಿಕಾರದ ಬೃಹತ್ ಸಮ್ಮೇಳನವು ಚಿತ್ರದುರ್ಗದ ಸಂಸ್ಥಾನ ಮಠದಲ್ಲಿ 2019ರ ಜ.5, 6 ರಂದು ನಡೆಯಲಿದೆ ಎಂದು ಮಡಿವಾಳರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ನಂಜಪ್ಪ ತಿಳಿಸಿದರು
ಸಮ್ಮೇಳನದಲ್ಲಿ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ, ಸಚಿವರು ಶಾಸಕರು ಸಾಹಿತಿಗಳು, ಮಠಾಧೀಶರು ಹಾಗೂ ಹೊರರಾಜ್ಯದಲ್ಲಿರುವ ಸಮುದಾಯದ ಶಾಸಕರು, ಸಚಿವರು ಭಾಗವಹಿಸಲಿದ್ಧಾರೆ.
ಸುದ್ದಿಗೋಷ್ಟಿಯಲ್ಲಿ ಮಡಿವಾಳ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ, ಮುಖಂಡರಾದ ಧೃವಕುಮಾರ, ವೆಂಕಟರಾಮಯ್ಯ, ರಾಮಾಂಜಿನೇಯ, ಹನುಮಂತಪ್ಪ, ಸಂಗಮೇಶ ಕಲ್ಹಾಳ್ ಇದ್ದರು.