ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 40 ಶಾಸಕರ ಬೆಂಬಲ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಇದೆ ಎಂದು ಪಕ್ಷದ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಶರದ್ ಪವಾರ್ ಸೋದರನ ಮಗ ಅಜಿತ್ ಪವಾರ್ ಅವರು ಕಳೆದವಾರ ಏಕನಾಥ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಿತ್ತು. ಹೀಗಾಗಿ ಶರದ್ ಪವಾರ್ ಹಾಗೂ ಅಜಿತ್ ಪವಾರ್ ಬಣಗಳು ಬುಧವಾರ ಪಕ್ಷದ ಶಾಸಕರ ಸಭೆ ಕರೆದಿವೆ.
ಅಜಿತ್ ಪವಾರ್ ಬಣವು ಬಾಂದ್ರಾದಲ್ಲಿರುವ ಮುಂಬೈ ಶಿಕ್ಷಣ ಟ್ರಸ್ಟ್ನಲ್ಲಿ ಆಯೋಜಿಸಿರುವ ಸಭೆಗೆ ಬಂದ ಪ್ರಫುಲ್ ಪಟೇಲ್ ಅವರು ಪಕ್ಷದ 40 ಶಾಸಕರ ಬೆಂಬಲ ತಮ್ಮ ಬಣಕ್ಕಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡಿದ್ದ ಸ್ವತಂತ್ರ ಶಾಸಕ ದೇವೇಂದ್ರ ಬುಯ್ಯಾರ್ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಶರದ್ ಪವಾರ್ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ. ಎನ್ಸಿಪಿ ಶಾಸಕರಾದ ಶಿರೂರ್ ಮತ್ತು ಅಶೋಕ್ ಪವಾರ್ ಅವರೂ ಪಕ್ಷದ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸಿದರು. ಇತ್ತೀಚೆಗೆ ನಡೆದ ಅಜಿತ್ ಪವಾರ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇವರು ಹಾಜರಿದ್ದರು.
ಎನ್ಸಿಪಿ ಶಾಸಕರಿಗೆ ಪಕ್ಷದ ವಿಪ್ ಅಧಿಕಾರಿ ಜಿತೇಂದ್ರ ಅವ್ಹಾದ್ ವಿಪ್ ಜಾರಿ ಮಾಡಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ರಾಜ್ಯದ ರಾಜಧಾನಿಯಲ್ಲಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಶಿವಸೇನೆ ಶಾಸಕರ ಸಭೆ ಕರೆದಿದ್ದಾರೆ.