ಮಥುರಾ: ಇಲ್ಲಿನ ಬಾಂಕೆ ಬಿಹಾರಿ ದೇವಾಲಯದ ಸಮೀಪ ಹಳೆಯ ಕಟ್ಟಡ ಕುಸಿದು ಐದು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಘಟನೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ದೇವಾಲಯಕ್ಕೆ ಹೋಗುತ್ತಿದ್ದ ಭಕ್ತರ ಮೇಲೆ ಕಟ್ಟಡದ ಭಾಗ ಕುಸಿದು ಬಿದ್ದಿದೆ.
ದುರಂತಕ್ಕೆ ಸಂತಾಪ ಸೂಚಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಒದಗಿಸುವುದನ್ನು ಖಾತ್ರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೃತರನ್ನು ಕಾನ್ಪುರದ ಗೀತಾ ಕಶ್ಯಪ್ (50), ಅರವಿಂದ್ ಕುಮಾರ್ ಯಾದವ್ (35), ರಶ್ಮಿ ಗುಪ್ತಾ (52), ವೃಂದಾವನದ ಅಂಜು ಮುರುಗನ್ (51) ಮತ್ತು ದೇವರಿಯಾದ ಚಂದನ್ ರಾಯ್ ಎಂದು ಗುರುತಿಸಲಾಗಿದೆ.