ಭೋಪಾಲ್: ಜಾನುವಾರುಗಳು ಮೇಯುವ ಪ್ರದೇಶದ ವಿಷಯದಲ್ಲಿ ಎರಡು ಗುಂಪುಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟು, ಎಂಟು ಜನರಿಗೆ ಗಾಯಗಳಾದ ಪ್ರಕರಣ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ದಾಂಗಿ ಮತ್ತು ಪಾಲ್ ಎಂಬ ಎರಡು ಸಮುದಾಯಗಳ ನಡುವೆ ರೆಂಡಾ ಗ್ರಾಮದಲ್ಲಿ ಬೆಳಿಗ್ಗೆ 9 ರ ಸುಮಾರಿಗೆ ಗಲಾಟೆ ನಡೆದಿದೆ. ರಾಜ್ಯ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಈ ಪ್ರದೇಶದ ಶಾಸಕರಾಗಿದ್ದಾರೆ.
'ಮೂರು ದಿನಗಳ ಹಿಂದೆ ಜಾನುವಾರುಗಳು ಮೇಯುವ ಪ್ರದೇಶದ ವಿಚಾರವಾಗಿ ಪ್ರಕಾಶ ದಾಂಗಿ ಮತ್ತು ಪ್ರೀತಮ್ ಪಾಲ್ ಎಂಬುವವರ ನಡುವೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಪ್ರೀತಮ್ ಕೆನ್ನೆಗೆ ಪ್ರಕಾಶ್ ಹೊಡೆದಿದ್ದರು. ಈ ಕುರಿತು ಇಬ್ಬರೂ ಪ್ರಕರಣ ದಾಖಲಿಸಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
ಆದರೆ ಈ ಘರ್ಷಣೆ ಇಷ್ಟಕ್ಕೇ ನಿಲ್ಲದೆ ಎರಡೂ ಸಮುದಾಯದವರು ಶಸ್ತ್ರ ಹಿಡಿದು ಬುಧವಾರ ಮತ್ತೆ ಮುಖಾಮುಖಿಯಾಗಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ದೂರುದಾರ ಪ್ರಕಾಶ್ ದಾಂಗಿ, ರಾಮ್ ನರೇಶ್ ದಾಂಗಿ, ಸುರೇಂದ್ರ ದಾಂಗಿ, ರಾಜೇಂದ್ರ ಪಾಲ್ ಹಾಗೂ ರಾಘವೇಂದ್ರ ಪಾಲ್ ಮೃತರು ಎಂದು ಗುರುತಿಸಲಾಗಿದೆ. ಇವರೆಲ್ಲರೂ 30 ವರ್ಷ ಮೇಲಿನವರ. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.