ಬರೇಲಿ: ‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚುತ್ತಿವೆ. ಅವರೇನು ಪಾಕಿಸ್ತಾನೀಯರಾ’ ಎಂದು ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಘವೇಂದ್ರ ವಿಕ್ರಂ ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ.
‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಗಲಭೆ ಸೃಷ್ಟಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ’ ಎಂದು ರಾಘವೇಂದ್ರ ವಿಕ್ರಂ ಸಿಂಗ್ ಅವರು ಭಾನುವಾರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಅದು ಟ್ರೆಂಡ್ ಆಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ, ಸದ್ಯ ಅವರ ಫೇಸ್ಬುಕ್ ಪುಟದಲ್ಲಿ ಈ ಸಂದೇಶ ಕಾಣಿಸುತ್ತಿಲ್ಲ.
ಉತ್ತರ ಪ್ರದೇಶದ ಕಾಸ್ಗಂಜ್ ಗಲಭೆಯನ್ನು ಉಲ್ಲೇಖಿಸಿ ಅವರು ಈ ಸಂದೇಶ ಪ್ರಕಟಿಸಿದ್ದರು ಎನ್ನಲಾಗಿದೆ. ಗಣರಾಜ್ಯೋತ್ಸವದಂದು ನಡೆದಿದ್ದ ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟದ್ದರು. ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಇದಾದ ಎರಡು ದಿನಗಳ ನಂತರ ಮ್ಯಾಜಿಸ್ಟ್ರೇಟರು, ‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಬಲವಂತವಾಗಿ ಮೆರವಣಿಗೆ ನಡೆಸುವುದು, ಅಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುವುದು ಟ್ರೆಂಡ್ ಆಗಿಬಿಟ್ಟಿದೆ. ಯಾಕೆ? ಅವರೇನು ಪಾಕಿಸ್ತಾನದವರಾ?’ ಎಂದು ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದರು.
ಮತ್ತೊಂದು ಸಂದೇಶದಲ್ಲಿ, ‘ಅತಿ ದೊಡ್ಡ ಶತ್ರುವಾಗಿರುವ ಚೀನಾದ ವಿರುದ್ಧ ಯಾಕೆ ಈ ಜನರು ಘೋಷಣೆ ಕೂಗುವುದಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
‘ದೇಶಭಕ್ತಿ’ಯ ಹೆಸರಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳು ಸಿಟ್ಟು ಬರಿಸಿವೆ ಎದು ರಾಘವೇಂದ್ರ ವಿಕ್ರಂ ಸಿಂಗ್ ಹೇಳಿಕೆ ನೀಡಿರುವುದಾಗಿಯೂ ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ.