ನವದೆಹಲಿ: ‘ಆಧಾರ್ ಗುರುತಿನ ಚೀಟಿ ಹೊಂದಿಲ್ಲದವರನ್ನು ಮತದಾನ ಮಾಡದಂತೆ ತಡೆಯುವುದಿಲ್ಲ’ ಎಂದು ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೋಮವಾರ ಭರವಸೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಹಲವು ಆಧಾರ್ ಗುರುತಿನ ಪತ್ರಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಕುರಿತು ಕಳವಳಗೊಂಡಿದ್ದ ಟಿಎಂಸಿ, ತನ್ನ ರಾಜ್ಯಸಭಾ ಸದಸ್ಯರಾದ ಸುಖೇಂದು ಶೇಖರ್ ರೇ, ಡೋಲಾ ಸೇನ್, ಸಾಕೆತ್ ಗೋಖಲೆ ಮತ್ತು ಲೋಕಸಭಾ ಸಂಸದರಾದ ಪ್ರತಿಮಾ ಮಂಡೊಲ್ ಹಾಗೂ ಸಾಜ್ದಾ ಅಹಮದ್ ಅವರನ್ನು ಒಳಗೊಂಡಿದ್ದ ನಿಯೋಗವನ್ನು ಮುಖ್ಯ ಚುನಾವಣಾ ಆಯುಕ್ತ ಬಳಿ ಕಳಿಸಿತ್ತು.
‘ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಅಥವಾ ಇತರ ಯಾವುದೇ ನಿರ್ದಿಷ್ಟ ಗುರುತಿನ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಬಹುದು’ ಎಂದು ಆಯೋಗ ನಿಯೋಗಕ್ಕೆ ತಿಳಿಸಿದೆ.
ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಖೇಂದು ಶೇಖರ್ ಅವರು, ‘ಆಧಾರ್ ಗುರುತಿನ ಪತ್ರಗಳು ಇಲ್ಲದಿದ್ದರೂ ಮತದಾನ ಮಾಡಲು ಮತದಾರರಿಗೆ ಅನುವು ಮಾಡಲಾಗುವುದು ಎಂದು ಚುನಾವಣಾ ಆಯೋಗ ಭರವಸೆ ನೀಡಿದೆ’ ಎಂದರು.