ನವದೆಹಲಿ(ಪಿಟಿಐ): ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ದೆಹಲಿ ಸರ್ಕಾರ, ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶನಿವಾರ ಮಂಡಿಸಲಾಗಿದ್ದ ವಿಶ್ವಾಸ ಮತ ಗೆದ್ದಿತು.
ಧ್ವನಿ ಮತದ ಮೂಲಕ ವಿಶ್ವಾಸ ಮತ ನಿರ್ಣಯವನ್ನು ಸದನ ಅಂಗೀಕರಿಸಿತು. ಆಡಳಿತಾರೂಢ ಎಎಪಿಯ 62 ಶಾಸಕರ ಪೈಕಿ 54 ಮಂದಿ ಉಪಸ್ಥಿತರಿದ್ದರು.
ವಿಶ್ವಾಸ ಮತ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ನನ್ನ ಸರ್ಕಾರಕ್ಕೆ ಪೂರ್ಣ ಬಹುಮತ ಇದೆ. ಆದರೆ, ಬಿಜೆಪಿಯು ಪಕ್ಷದ ಶಾಸಕರನ್ನು ಖರೀದಿ ಮಾಡುವ ಮೂಲಕ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಸಿತ್ತು. ಈ ಕಾರಣಕ್ಕೆ ವಿಶ್ವಾಸ ಮತ ಕೋರಬೇಕಾಯಿತು’ ಎಂದು ಹೇಳಿದರು.
‘ಎಎಪಿಯ ಯಾವೊಬ್ಬ ಶಾಸಕ ಪಕ್ಷಾಂತರ ಮಾಡುವುದಿಲ್ಲ. ಇಬ್ಬರು ಜೈಲಿನಲ್ಲಿದ್ದರೆ, ಕೆಲವರ ಆರೋಗ್ಯ ಸರಿ ಇಲ್ಲ. ಇನ್ನು ಕೆಲ ಶಾಸಕರು ದೆಹಲಿಯಲ್ಲಿ ಇಲ್ಲ’ ಎಂದರು.
‘ಬಿಜೆಪಿಗೆ ಆಮ್ ಆದ್ಮಿ ಪಕ್ಷವೇ ದೊಡ್ಡ ಸವಾಲು. ಹೀಗಾಗಿ ಪಕ್ಷದ ಮೇಲೆ ಎಲ್ಲ ಆಯಾಮಗಳಿಂದಲೂ ಬಿಜೆಪಿ ದಾಳಿ ನಡೆಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಹುದು. ಆದರೆ, 2029ರಲ್ಲಿ ನಡೆಯುವ ಚುನಾವಣೆಯಲ್ಲಿ ಕೇಸರಿ ಪಕ್ಷದ ಹಿಡಿತದಿಂದ ದೇಶವನ್ನು ಎಎಪಿ ಪಾರು ಮಾಡಲಿದೆ’ ಎಂದು ಹೇಳಿದರು.
‘ಬಿಜೆಪಿಯವರು ತಮ್ಮನ್ನು ರಾಮನ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ನೀಡಬೇಕಾದ ಔಷಧಗಳ ಪೂರೈಕೆಯನ್ನು ಸ್ಥಗಿತಗೊಳಿಸಿದರು. ಬಡವರಿಗೆ ಔಷಧಗಳ ಪೂರೈಕೆ ನಿಲ್ಲಿಸುವಂತೆ ಭಗವಾನ್ ರಾಮ ಹೇಳಿದ್ದನೇ’ ಎಂದು ಪ್ರಶ್ನಿಸಿದರು.
ದೆಹಲಿ ವಿಧಾನಸಭೆಯಲ್ಲಿ ಶನಿವಾರ ಮಂಡಿಸಲಾದ ವಿಶ್ವಾಸ ಮತ ನಿರ್ಣಯದ ಮೇಲೆ ಚರ್ಚೆ ವೇಳೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾತನಾಡಿದರು –ಪಿಟಿಐ ಚಿತ್ರ
ನೀವು ನನ್ನನ್ನು ಬಂಧಿಸಬಹುದು. ಆದರೆ ನನ್ನ ವಿಚಾರಧಾರೆಗಳನ್ನು ನೀವು ಹೇಗೆ ನಾಶ ಮಾಡಬಲ್ಲಿರಿ?