ನವದೆಹಲಿ: ‘ಶೆಲ್ ಕಂಪನಿಗಳ ಮೂಲಕ ಹಣ ಅಕ್ರಮ ವರ್ಗಾವಣೆ ಸೇರಿದಂತೆ ಅದಾನಿ ಸಮೂಹ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಕೂಡಲೇ ತನಿಖೆ ಆರಂಭಿಸಬೇಕು’ ಎಂದು ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ನಾಯಕರು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಬುಧವಾರ ಪತ್ರ ಬರೆದಿದ್ದಾರೆ.
‘ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇ.ಡಿ ಮೌನ ತಾಳಬಾರದು ಹಾಗೂ ತನಗಿರುವ ಅಧಿಕಾರವನ್ನು ಬಿಟ್ಟುಕೊಡಬಾರದು ’ ಎಂದು ಇ.ಡಿ ನಿರ್ದೇಶಕ ಎಸ್.ಕೆ.ಮಿಶ್ರಾ ಅವರಿಗೆ ಇ–ಮೇಲ್ ಮೂಲಕ ಕಳಿಸಿರುವ ಪತ್ರದಲ್ಲಿ ವಿವರಿಸಿದ್ದಾರೆ.
ಕಾಂಗ್ರೆಸ್, ಸಿಪಿಐ, ಸಿಪಿಎಂ, ಜೆಡಿಯು, ಶಿವಸೇನಾ (ಉದ್ಧವ್ ಠಾಕ್ರೆ ಬಣ), ಆರ್ಜೆಡಿ, ಡಿಎಂಕೆ, ಜೆಎಂಎಂ, ಎಎಪಿ, ಐಯುಎಂಎಲ್, ವಿಸಿಕೆ, ಕೇರಳ ಕಾಂಗ್ರೆಸ್ ಪಕ್ಷಗಳ ನಾಯಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯವು ರಾಜಕೀಯವಾಗಿ ಅನುಕೂಲ ಮಾಡಿಕೊಟ್ಟಿದೆ ಎನ್ನಲಾದ ರೀತಿಯಲ್ಲಿ ಕೆಲ ಪ್ರಕರಣಗಳಲ್ಲಿ ತನಿಖೆ ನಡೆಸಿರುವುದು ನಮಗೆ ತಿಳಿದಿದೆ. ಅದಾನಿ ಸಮೂಹದ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿರುವ ಆಯೋಗದ ಮಿತಿಗಳ ಬಗ್ಗೆಯೂ ಅರಿವಿದೆ. ಹೀಗಾಗಿ, ಈ ವಿಷಯದಲ್ಲಿ ಇ.ಡಿ ತನ್ನ ಕಾರ್ಯವ್ಯಾಪ್ತಿ ಹಾಗೂ ಜವಾಬ್ದಾರಿಯಿಂದ ವಿಮುಖವಾಗುವುದು ಸರಿಯಲ್ಲ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಪೊಲೀಸರಿಂದ ತಡೆ: ಇದಕ್ಕೂ ಮುನ್ನ, ವಿರೋಧ ಪಕ್ಷಗಳ ಮುಖಂಡರು, ದೂರು ಸಲ್ಲಿಸುವ ಸಲುವಾಗಿ ಸಂಸತ್ ಭವನದಿಂದ ಇ.ಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡದೇ, ವಿಜಯ ಚೌಕದಲ್ಲಿಯೇ ವಿಪಕ್ಷಗಳ ನಾಯಕರನ್ನು ತಡೆದರು.