ನವದೆಹಲಿ: ಕಾಶ್ಮೀರದ ಶಾರದಾ ದೇವಾಲಯದಲ್ಲಿ ನವರಾತ್ರಿ ಪೂಜೆ ನಡೆದಿರುವುದನ್ನು ಶ್ಲಾಘಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಇದು ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಿರುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
1947ರ ಬಳಿಕ ಮೊದಲ ಬಾರಿಗೆ ಈ ದೇಗುಲದಲ್ಲಿ ನವರಾತ್ರಿ ಪೂಜೆ ನಡೆದಿದೆ.
'ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ವಾಲೆಯು ಪ್ರಜ್ವಲಿಸುತ್ತಿದೆ’ ಎಂದು ಶಾ ಅವರು ‘ಎಕ್ಸ್’ ವೇದಿಕೆಯಲ್ಲಿ ಹೇಳಿದ್ದಾರೆ.
ಕಾಶ್ಮೀರದ ತೀತ್ವಾಲ್ನ ಗಡಿ ನಿಯಂತ್ರಣ ರೇಖೆಯ ಬಳಿಯಿರುವ ನವೀಕೃತ ಶಾರದಾ ದೇಗುಲದಲ್ಲಿ ಸೋಮವಾರ ನವರಾತ್ರಿ ಪೂಜೆ ನಡೆದಿತ್ತು. ನವೀಕೃತ ದೇಗುಲವನ್ನು ಮಾರ್ಚ್ 23ರಂದು ಅಮಿತ್ ಶಾ ಅವರು ಉದ್ಘಾಟಿಸಿದ್ದರು. ದೇಶ ವಿಭಜನೆಯಾಗುವ ಮೊದಲು ಇದೇ ಸ್ಥಳದಲ್ಲಿ ಮೂಲ ದೇಗುಲವಿತ್ತು.
ದೇಶದ ವಿವಿಧೆಡೆಯಿಂದ ಬಂದಿದ್ದ ಯಾತ್ರಿಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.