ತಿರುಪತಿ: ತಿರುಮಲದ ವೆಂಕಟೇಶ್ವರ ದೇಗುಲಕ್ಕೆ ಹೋಗುವ ದಾರಿಯಲ್ಲಿ ಚಿರತೆಯೊಂದನ್ನು ಸೆರೆಹಿಡಿಯಲಾಗಿದೆ ಎಂದು ಆಂಧ್ರಪ್ರದೇಶದ ಅರಣ್ಯ ಇಲಾಖೆ ಗುರುವಾರ ಹೇಳಿದೆ.
ಹೀಗೆ ಸೆರೆಹಿಡಿಯುತ್ತಿರುವ ಮೂರನೇ ಚಿರತೆ ಇದಾಗಿದೆ.
ತಿರುಮಲಕ್ಕೆ ಹೋಗುವ ದಾರಿಯಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಸಮೀಪ ಈ ಚಿರತೆಯನ್ನು ಸೆರೆಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.
ಮೂರು ದಿನದ ಅಂತರದಲ್ಲಿ ಸೆರೆ ಹಿಡಿಯಲಾಗುತ್ತಿರುವ ಎರಡನೇ ಚಿರತೆ ಇದಾಗಿದೆ. ಅದಕ್ಕೂ ಮುನ್ನ ಚಿರತೆಯೊಂದು ಬಾಲಕನ ಮೇಲೆ ದಾಳಿ ನಡೆಸಿತ್ತು. ಅದನ್ನೂ ಕೂಡ ಸೆರೆಹಿಡಿಯಲಾಗಿತ್ತು.
‘ಎರಡನೇ ಚಿರತೆಯನ್ನು ಸೆರೆಹಿಡಿದ ಲಕ್ಷ್ಮೀ ನರಸಿಂಹ ದೇಗುಲದ ಬಳಿಯ ಅದೇ ಸ್ಥಳದಲ್ಲಿ ಮೂರನೇ ಚಿರತೆಯನ್ನು ಸರೆಹಿಡಿಯಲಾಗಿದೆ. ಇದು ಗಂಡು ಚಿರತೆ. ಸುಮಾರು ಐದು ವರ್ಷ ಇರಬಹುದು’ ಎಂದು ತಿರುಪತಿಯ ವಿಭಾಗೀಯ ಅರಣ್ಯಾಧಿಕಾರಿ ಶ್ರೀನಿವಾಸುಲು ಹೇಳಿದ್ದಾರೆ.
ಸೆರೆಹಿಡಿಯಲಾದ ಚಿರತೆಯನ್ನು ತಿರುಪತಿ ಮೃಗಾಲಯದಲ್ಲಿ 10 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗುವುದು. ಮಾನವ ಮಾಂಸ ಭಕ್ಷಣೆ ಮಾಡಿದ್ದರ ಬಗ್ಗೆ ಡಿಎನ್ಎ ಪರೀಕ್ಷೆ ಕೂಡ ನಡೆಸಲಾಗುವುದು ಎಂದು ಶ್ರೀನಿವಾಸುಲು ಹೇಳಿದ್ದಾರೆ.
ಏತನ್ಮಧ್ಯೆ ಎರಡನೇ ಚಿರತೆಯ ಡಿಎನ್ಎ ವರದಿಗೆ ಕಾಯಲಾಗುತ್ತಿದೆ. ತಿರುಮಲಕ್ಕೆ ಹೋಗುವ ಪ್ರದೇಶದಲ್ಲಿ ಪ್ರಾಣಿಗಳ ಸಂಚಾರದ ಬಗ್ಗೆ ನಿಗಾವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.