ಗುವಾಹಟಿ: ಭಾರತ–ಚೀನಾ ಗಡಿ ಸಮೀಪ ಮಂಗಳವಾರ ಸಂಜೆ ಬೇಟೆಯಾಡಲು ತೆರಳಿದ್ದ 17 ವರ್ಷದ ಯುವಕನೊಬ್ಬನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಅಪಹರಿಸಿದೆ ಎಂದು ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕ ಮತ್ತು ಬಿಜೆಪಿ ಸಂಸದರೊಬ್ಬರು ಟ್ವೀಟ್ ಮಾಡಿದ್ದಾರೆ.
‘ಸಿಯಾಂಗ್ ಜಿಲ್ಲೆಯ ಝಿಡೋ ಗ್ರಾಮದ ನಿವಾಸಿಮಿರಾಮ್ ತರೊನ್ ತನ್ನ ಸ್ನೇಹಿತನೊಂದಿಗೆ ಮಂಗಳವಾರ ಸಂಜೆ ಸುಮಾರು 6.30ಕ್ಕೆ ಬಿಶಿಂಗ್ ಗ್ರಾಮದ ಬಳಿ ಬೇಟೆಯಾಡಲು ಹೋಗಿದ್ದರು. ಈ ವೇಳೆ ಪಿಎಲ್ಎ ಮಿರಾಮ್ನನ್ನು ಅಪಹರಿಸಿದೆ. ಬಾಲಕನನ್ನು ರಕ್ಷಿಸಿ ಕರೆತರಲುವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿ ಸಂಸದ ತಾಪಿರ್ ಗಾವೊ ಅವರು ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ.
‘ಮಿರಾಮ್ನೊಂದಿಗಿದ್ದ ಜಾನಿ ಯಾಯಿಂಗ್ ಪಿಎಲ್ಎನಿಂದ ತಪ್ಪಿಸಿಕೊಂಡು ಬಂದು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್ ಅವರು,‘ ಬಾಲಕನನ್ನು ಸುರಕ್ಷಿತವಾಗಿ ವಾಪಾಸು ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಾಯ ಮಾಡಬೇಕು. ಜತೆಗೆ, ಚೀನಾದ ನುಸುಳುಕೋರರ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಕೋರಿದ್ದಾರೆ.