ನವದೆಹಲಿ: ಲಡಾಖ್ ಗಡಿಪ್ರದೇಶದ ಮೇಲೆ ಕೆಟ್ಟ ದೃಷ್ಟಿ ನೆಟ್ಟವರಿಗೆ ಭಾರತ ತಕ್ಕ ಉತ್ತರವನ್ನು ನೀಡಿದೆ. ದೇಶದ ಘನತೆಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ನಮ್ಮ ಧೀರ ಯೋಧರು ತೋರಿಸಿಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಮನದ ಮಾತಿನಲ್ಲಿ ಮಾತನಾಡಿದ ಮೋದಿ ಸ್ಥಳೀಯ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸುದೃಢಗೊಳಿಸಲು ಕರೆ ನೀಡಿದ್ದಾರೆ.
ಭಾರತ ಸ್ನೇಹ ಸಂಬಂಧವನ್ನು ಗೌರವಿಸುತ್ತದೆ ಆದರೆ ಯಾವುದೇ ಪ್ರತಿಕೂಲ ಪರಿಸ್ಥಿತಿ ಎದುರಾದರೆ ತಕ್ಕ ಉತ್ತರವನ್ನೂ ನೀಡುತ್ತೇವೆ ಎಂದು ಚೀನಾದ ಹೆಸರು ಉಲ್ಲೇಖಿಸದೆ ಮೋದಿ ಹೇಳಿದ್ದಾರೆ.
ಲಡಾಖ್ ಗಡಿಯಲ್ಲಿ ಕೆಟ್ಟ ದೃಷ್ಟಿ ನೆಟ್ಟವರಿಗೆ ತಕ್ಕ ಉತ್ತರ ನೀಡಲಾಗಿದೆ.ದೇಶಕ್ಕೆ ಯಾವುದೇ ಆಪತ್ತು ಬರದಂತೆ ನಮ್ಮ ಧೀರ ಯೋಧರು ದೇಶದ ಘನತೆಯನ್ನು ಕಾಪಾಡಿದ್ದಾರೆ. ನಮ್ಮ ದೇಶದ ಗಡಿ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲಿರುವ ನಮ್ಮ ಧೈರ್ಯ ಮತ್ತು ಬದ್ಧತೆಯನ್ನು ಜಗತ್ತು ನೋಡಿದೆ. ಚೀನಾ ಪಡೆಯೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾದ 20 ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದಿದ್ದಾರೆ ಮೋದಿ.
ಕೊರೊನಾವೈರಸ್ ದೇಶದಾದ್ಯಂತ ಹರಡುತ್ತಿದೆ. ಅನ್ಲಾಕ್ ಅವಧಿಯಲ್ಲಿ ಜನರು ಮತ್ತಷ್ಟು ಜಾಗರೂಕತೆಯಿಂದ ಇರಬೇಕು. ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೇ ಇದ್ದರೆ ಜನರು ಸ್ವಯಂ ಅಪಾಯಕ್ಕೊಳಗಾಗುವುದು ಅಲ್ಲದೆ ಇನ್ನೊಬ್ಬರಿಗೂ ಅಪಾಯ ತಂದೊಡ್ಡಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.