ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಜಾಟ್ ಸಮುದಾಯದ ದೊಡ್ಡ ಬೆಂಬಲವಿತ್ತು. ಆದರೆ ಈಗ ನೂತನ ಕೃಷಿ ಕಾಯ್ದೆಗಳ ಕಾರಣದಿಂದ ಜಾಟ್ ಸಮುದಾಯವು ಬಿಜೆಪಿಯಿಂದ ದೂರ ಸರಿದಿದೆ. ಕೃಷಿಯೇ ಪ್ರಧಾನ ಕಸುಬಾದ ಈ ಸಮುದಾಯದ ಬಹುತೇಕ ಮಂದಿ ರೈತ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಇದು ಬಿಜೆಪಿಗೆ ಮುಳುವಾಗಬಹುದು. ಈ ಸಂಭಾವ್ಯ ನಷ್ಟವನ್ನು ಸರಿದೂಗಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಬೇರೆ ಜಾತಿಗಳ ಓಲೈಕೆಗೆ ಮುಂದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.