ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಕೇಸ್‌ನಲ್ಲಿ 25 ವರ್ಷ ಜೈಲು: ವಿಧಾನಸಭೆಯಿಂದ ಬಿಜೆಪಿ ಶಾಸಕ ಗೊಂಡ ಅನರ್ಹ

Published 23 ಡಿಸೆಂಬರ್ 2023, 11:43 IST
Last Updated 23 ಡಿಸೆಂಬರ್ 2023, 11:43 IST
ಅಕ್ಷರ ಗಾತ್ರ

ಲಖನೌ: ಒಂಬತ್ತು ವರ್ಷಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಇತ್ತೀಚೆಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಶಾಸಕ ರಾಮ್‌ ದುಲಾರ್‌ ಗೊಂಡ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಪ್ರಜಾಪ್ರತಿನಿಧಿ ಕಾಯಿದೆಯ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಜೈಲು ಶಿಕ್ಷೆಗೆ ಗುರಿಯಾದ ಶಾಸಕರು ಅಪರಾಧ ಸಾಬೀತಾದ ದಿನಾಂಕದಿಂದ ಅನರ್ಹರಾಗುತ್ತಾರೆ. ಜತೆಗೆ ಶಿಕ್ಷೆಯ ಅವಧಿ ಮುಗಿದ ನಂತರ ಇನ್ನೂ ಆರು ವರ್ಷಗಳವರೆಗೆ ಅನರ್ಹರಾಗಿರುತ್ತಾರೆ.

ಪ್ರಕರಣ ಕುರಿತು ಡಿಸೆಂಬರ್ 12ರಂದು ತೀರ್ಪು ಪ್ರಕಟಿಸಲಾಗಿತ್ತು. ಮೂರು ದಿನಗಳ ಬಳಿಕ ಅಂದರೆ ಡಿ.15ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗಿತ್ತು. ಸೋನ್‌ಭದ್ರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಹ್ಸಾನ್‌ ಉಲ್ಲಾ ಖಾನ್‌ ಅವರು ಶಿಕ್ಷೆಯ ಜತೆಗೆ ₹10 ಲಕ್ಷ ದಂಡ ವಿಧಿಸಿದ್ದರು. ದಂಡದ ಮೊತ್ತವನ್ನು ಸಂತ್ರಸ್ತೆಯ ಪುನರ್ವಸತಿಗೆ ಬಳಸುವಂತೆ ಸೂಚಿಸಿದ್ದರು.

2014ರಲ್ಲಿ ಅತ್ಯಾಚಾರ ನಡೆದಿತ್ತು. ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಮೇರೆಗೆ ಗೊಂಡ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಸಂದರ್ಭದಲ್ಲಿ ಗೊಂಡ ಶಾಸಕರಾಗಿರಲಿಲ್ಲ. ಅವರ ಪತ್ನಿ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದರು. ಪೋಕ್ಸೊ ಕಾಯಿದೆ ಅಡಿ ಪ್ರಕರಣದ ವಿಚಾರಣೆ ಪ್ರಾರಂಭಗೊಂಡಿತ್ತು. ಗೊಂಡ ಶಾಸಕರಾಗಿ ಆಯ್ಕೆಯಾದ ನಂತರ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸತ್ಯಪ್ರಕಾಶ್ ತ್ರಿಪಾಠಿ ತಿಳಿಸಿದ್ದಾರೆ.

ಈವರೆಗೆ ಅನರ್ಹಗೊಂಡ ಶಾಸಕರು

‌ರಾಜ್ಯದಲ್ಲಿ(ಉತ್ತರ ಪ್ರದೇಶ) ಈ ಹಿಂದೆ ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಹಲವು ಶಾಸಕರನ್ನು ಅನರ್ಹಗೊಳಿಸಲಾಗಿದೆ.

  • 2022ರ ಅಕ್ಟೋಬರ್‌ನಲ್ಲಿ ಸಮಾಜವಾದಿ ಪಕ್ಷದ ಶಾಸಕ ಅಜಮ್ ಖಾನ್ ಮತ್ತು ಬಿಜೆಪಿಯ ವಿಕ್ರಮ್ ಸಿಂಗ್ ಸೈನಿ (ಖತೌಲಿ ಶಾಸಕ) ಅವರನ್ನು ಅನರ್ಹಗೊಳಿಸಲಾಗಿತ್ತು.

2019ರಲ್ಲಿ ದ್ವೇಷ ಭಾಷಣ ಪ್ರಕರಣದಲ್ಲಿ ಖಾನ್ ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು. 2013ರ ಮುಜಫರ್‌ನಗರ ಗಲಭೆ ಪ್ರಕರಣದಲ್ಲಿ ಸೈನಿ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

  • ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಉನ್ನಾವೊದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು 2020ರ ಫೆಬ್ರುವರಿಯಲ್ಲಿ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. ಈ ಹಿಂದೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.

  • ಅಜಂ ಖಾನ್ ಅವರ ಪುತ್ರ ಮತ್ತು ಸಮಾಜವಾದಿ ಪಕ್ಷದ ಶಾಸಕ ಅಬ್ದುಲ್ಲಾ ಅಜಂ ಖಾನ್ ಅವರು ಈ ವರ್ಷದ ಫೆಬ್ರುವರಿಯಲ್ಲಿ ವಿಧಾನಸಭೆಯ ಸದಸ್ಯತ್ವವನ್ನು ಕಳೆದುಕೊಂಡಿದ್ದರು. 2007ರ ಡಿಸೆಂಬರ್ 31 ರಂದು ರಾಂಪುರ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದಕ್ಕಾಗಿ ಅವರು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT