ಉನ್ನಾವೊ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ‘ಪಾಕಿಸ್ತಾನದ ಸಂಖ್ಯೆಯಿಂದ ತಮಗೆ ಕರೆ ಬಂದಿದ್ದು, ಬಾಂಬ್ ಸ್ಫೋಟಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರರ ಸಂಘಟನೆಯಿಂದ ಎರಡು ಕರೆಗಳು ಬಂದಿವೆ. ಮನೆಯೊಂದಿಗೇ ಸ್ಫೋಟಿಸುವುದಾಗಿ ಬೆದರಿಸಿದ್ದಾರೆ ಎಂದು ಅವರು ಸಾದರ್ ಕೊತ್ವಾಲಿ ಠಾಣೆಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ.
‘ಕರೆ ಮಾಡಿದಾತ, ಕಾಶ್ಮೀರ ಶೀಘ್ರದಲ್ಲಿಯೇ ಪಾಕಿಸ್ತಾನದ ಭಾಗವಾಗಲಿದೆ ಎಂದು ತಿಳಿಸಿದ್ದಾನೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಕ್ಕೆ ಅನುಚಿತ ಭಾಷೆ ಬಳಸಿ ಟೀಕಿಸಿದ್ದಾನೆ’ ಎಂದು ದೂರಿನಲ್ಲಿ ಹೇಳಿದ್ದಾರೆ.
ಸದ್ಯ, ಸಂಸದರಿಗೆ ‘ವೈ’ ದರ್ಜೆಯ ಭದ್ರತೆ ಇದ್ದು, ಮನೆಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆದರಿಕೆ ಕರೆಯ ಬಂದಿರುವ ಕಾರಣ ಭದ್ರತೆ ಸ್ವರೂಪವನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಪಿ.ಕಾನೆ ತಿಳಿಸಿದ್ದಾರೆ.