ಲಖನೌ: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆಲವು ಬಿಜೆಪಿ ಸಂಸದರು ಘೋಷಿಸಿದ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ‘ಬಿಜೆಪಿ ಹಿಂದೆಂದೂ ಇಷ್ಟೊಂದು ದುರ್ಬಲ ಪಕ್ಷವಾಗಿರಲಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಅಖಿಲೇಶ್ ಅವರು, ‘ಟಿಕೆಟ್ ಸಿಗುವ ಮುನ್ನವೇ ಕೆಲವು ಮುಖ್ಯ ಕೆಲಸಗಳ ಕಾರಣ ಹೇಳಿ ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇಂಥ ದಿನಗಳು ಬಿಜೆಪಿಗೆ ಬರುತ್ತವೆ ಎಂಬುದನ್ನು ಯಾರು ಯೋಚಿಸಿದ್ದರು?’ ಎಂದಿದ್ದಾರೆ.
‘ರಾಜಕೀಯಕ್ಕಿಂತಲೂ ಕ್ರೀಡೆ ಮುಖ್ಯವೆಂದು ಹೇಳಿ ಒಬ್ಬರು ಪಕ್ಷ ಬಿಡುವ ಮಾತನ್ನಾಡುತ್ತಾರೆ. ಪರಿಸರದ ಸ್ಥಿತಿಯನ್ನು ಕಾರಣವಾಗಿಟ್ಟುಕೊಂಡು ಮತ್ತೊಬ್ಬರು ಪಕ್ಷದಿಂದ ಹೊರನಡೆಯುವ ಕುರಿತು ಅರ್ಜಿ ಹಾಕುತ್ತಾರೆ’ ಎಂದು ಹೇಳಿದ್ದಾರೆ.
‘ಟಿಕೆಟ್ ಸಿಕ್ಕ ಬಳಿಕವೂ ಒಬ್ಬರು ನಿವೃತ್ತಿ ಘೋಷಿಸಿದರೆ, ಮತ್ತೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಟಿಕೆಟ್ ನಿರಾಕರಿಸಿದ್ದಾರೆ’ ಎಂದು ಅವರು ಬಿಜೆಪಿಯ ಕಾಲೆಳೆದಿದ್ದಾರೆ.