ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಎಪಿ ತುಳಿಯಲು ಬಿಜೆಪಿಯಿಂದ ‘ಆಪರೇಷನ್‌ ಝಾಡು’: ಕೇಜ್ರಿವಾಲ್‌ ಆರೋಪ

Published 19 ಮೇ 2024, 9:57 IST
Last Updated 19 ಮೇ 2024, 9:57 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೇಸರಿ ಪಾಳಯಕ್ಕೆ ಸವಾಲಾಗಿ ಬೆಳೆಯುತ್ತಿರುವ ಎಎಪಿಯನ್ನು ಹತ್ತಿಕ್ಕಲು ಆಡಳಿತಾರೂಢ ಬಿಜೆಪಿಯು ‘ಆಪರೇಷನ್‌ ಝಾಡು’ ಹಮ್ಮಿಕೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ಆರೋಪಿಸಿದರು. ‘ಝಾಡೂ’ ಅಂದರೆ ಪೊರಕೆ. ಅದು ಎಎಪಿಯ ಚುನಾವಣಾ ಚಿಹ್ನೆ.

ಬಿಜೆಪಿ ಕೇಂದ್ರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಸಾಗುವ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪಕ್ಷದ ಕಾರ್ಯಕರ್ತರು ದೊಡ್ಡ ಸವಾಲಿಗೆ ಸಿದ್ಧರಾಗಬೇಕು. ಈ ರೀತಿಯ ಹಲವು ಅಡೆತಡೆಗಳನ್ನು ಹಿಂದೆ ಎದುರಿಸಿ ನಾವು ಮುಂದೆ ಸಾಗಿದ್ದೇವೆ ಎಂಬುದನ್ನು ನೆನಪಿಡಿ’ ಎಂದು ಅವರು ಹೇಳಿದರು.

‘ಎಎಪಿ ಕಟ್ಟಿ ಹಾಕಲು ಬಿಜೆಪಿ ತಂತ್ರ’

‘ಎಎಪಿಯನ್ನು ಕಟ್ಟಿಹಾಕಲು ಮೂರು ಬಗೆಯ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ. ಮೊದಲಿಗೆ ಎಎಪಿ ನಾಯಕರನ್ನು ಬಂಧಿಸುವುದು, ನಂತರ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸುವುದು, ಬಳಿಕ ಪಕ್ಷದ ಕಚೇರಿಯಿಂದ ಹೊರಹಾಕುವುದು ಇದರಲ್ಲಿ ಸೇರಿವೆ’ ಎಂದು ಕೇಜ್ರಿವಾಲ್‌ ವಿವರಿಸಿದರು.

‘ದೇಶದಾದ್ಯಂತ ಎಎಪಿಯ ಕ್ಷಿಪ್ರಗತಿಯ ಬೆಳವಣಿಗೆಯಿಂದ ಪ್ರಧಾನಿ ನರೇಂದ್ರ ಮೋದಿ ಚಿಂತಿತರಾಗಿದ್ದಾರೆ. ಹೀಗಾಗಿಯೇ ಅವರು ನಮ್ಮ ಪಕ್ಷವನ್ನು ತುಳಿಯಲು ಆಪರೇಷನ್‌ ಝಾಡು (ಪೊರಕೆ) ಆರಂಭಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ನಾಯಕರನ್ನು ಬಂಧಿಸುವ, ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವ ಮತ್ತು ಕಚೇರಿಯಿಂದ ಹೊರದಬ್ಬುವ ಯೋಜನೆ ಅವರದ್ದಾಗಿದೆ’ ಎಂದು ಅವರು ಹೇಳಿದರು.

‘ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಮಗೆ ಭಗವಾನ್‌ ಹನುಮಂತ ಮತ್ತು ದೇವರ ಆಶೀರ್ವಾದವಿದೆ. ಸಮಾಜಕ್ಕಾಗಿ ಕೆಲಸ ಮಾಡಲು ನಾವು ಬಯಸುತ್ತಿರುವುದರಿಂದ ಸತ್ಯದ ಹಾದಿಯಲ್ಲಿ ಸಾಗೋಣ’ ಎಂದು ಅವರು ಕರೆ ನೀಡಿದರು.

ಎಎಪಿ ಸಂಸದೆ ಸ್ವಾತಿ ಮಾಲಿವಾಲ್‌ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಶನಿವಾರ ತಮ್ಮ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅವರನ್ನು ಬಂಧಿಸಿದ ಬಳಿಕ ಕೇಜ್ರಿವಾಲ್‌ ಅವರು, ‘ಬಿಜೆಪಿ ಕೇಂದ್ರ ಕಚೇರಿಗೆ ಪಕ್ಷದ ನಾಯಕರೊಂದಿಗೆ ಭಾನುವಾರ ಮೆರವಣಿಗೆ ಸಾಗಲಾಗುವುದು. ಪ್ರಧಾನಿ ಮೋದಿ ಅವರು ನಮ್ಮಲ್ಲಿ ಯಾರನ್ನಾದರೂ ಬಂಧಿಸುವ ಧೈರ್ಯ ತೋರಲಿ’ ಎಂದು ಸವಾಲು ಹಾಕಿದ್ದರು.

‘ಬಂಧಿಸದಿದ್ದರೆ ನೀವು ಸೋತಂತೆ’

ಭಾನುವಾರ ಮೆರವಣಿಗೆ ಆರಂಭಕ್ಕೂ ಮುನ್ನ ಅವರು, ‘ಮೆರವಣಿಗೆಯು ಶಾಂತಿಯುತವಾಗಿ ಇರುತ್ತದೆ. ಪೊಲೀಸರು ತಡೆದರೆ, ಅದೇ ಸ್ಥಳದಲ್ಲಿ 30 ನಿಮಿಷ ಕುಳಿತುಕೊಂಡು ಕಾಯುತ್ತೇವೆ. ಈ ಅವಧಿಯಲ್ಲಿ ನಮ್ಮಲ್ಲಿ ಯಾರನ್ನಾದರೂ ಬಂಧಿಸುತ್ತಾರೆಯೋ ಎಂಬುದನ್ನು ನೋಡುತ್ತೇವೆ. ಒಂದು ವೇಳೆ ಅವರು ನಮ್ಮನ್ನು ಬಂಧಿಸದಿದ್ದರೆ ಅದು ಅವರ ಸೋಲಾಗುತ್ತದೆ’ ಎಂದು ಹೇಳಿದರು.

‘ನಮ್ಮೆಲ್ಲರನ್ನೂ ಜೈಲಿಗೆ ಕಳುಹಿಸಿ ನೋಡಿ. ಇದರಿಂದ ಪಕ್ಷ ಕೊನೆಗೊಳ್ಳುತ್ತದೆಯೋ ಅಥವಾ ಇನ್ನಷ್ಟು ಬಲಿಷ್ಠವಾಗಿ ಪುಟಿದೇಳುತ್ತದೆಯೋ’ ಎಂದು ಅವರು ಪ್ರಧಾನಿಗೆ ಸವಾಲು ಹಾಕಿದರು.

‘ನೀವು ಒಬ್ಬ ನಾಯಕನನ್ನು ಬಂಧಿಸಿದರೆ ಭಾರತ ಮಾತೆ 100 ನಾಯಕರಿಗೆ ಜನ್ಮ ನೀಡುತ್ತಾಳೆ; ಒಬ್ಬ ಕೇಜ್ರಿವಾಲ್‌ ಅನ್ನು ಬಂಧಿಸಿದರೆ, ಆ ತಾಯಿ ನೂರಾರು ಮತ್ತು ಸಾವಿರಾರು ಕೇಜ್ರಿವಾಲ್‌ಗಳಿಗೆ ಜನ್ಮ ನೀಡುತ್ತಾಳೆ. ನೀವು ಬೇಕಿದ್ದರೆ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ ನೋಡಿ’ ಎಂದು ಹೇಳಿದರು. 

‘ಪ್ರಧಾನಿಗೆ ಭಯ’

ಕೇಜ್ರಿವಾಲ್‌ ಅವರ ಭಾಷಣದ ಬಳಿಕ, ಅವರ ನೇತೃತ್ವದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಕಚೇರಿಯತ್ತ ಮೆರವಣಿಗೆ ಸಾಗಿದರು. ಮೆರವಣಿಗೆಯನ್ನು ಮಾರ್ಗ ಮಧ್ಯದಲ್ಲಿ ಪೊಲೀಸರು ತಡೆದರು. ಅರ್ಧ ಗಂಟೆಯ ಬಳಿಕ ಎಎಪಿಯ ಹಿರಿಯ ನಾಯಕ ಸಂಜಯ್‌ ಸಿಂಗ್‌ ಅವರು, ‘ಭಯಭೀತರಾಗಿರುವ ಪ್ರಧಾನಿ ಅವರು ನಮ್ಮನ್ನು ಬಂಧಿಸಲು ಆದೇಶಿಸಿಲ್ಲ’ ಎಂದು ಹೇಳಿ ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿರುವುದಾಗಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT