ನವದೆಹಲಿ: ಮತ ಕೇಂದ್ರಗಳನ್ನು ವಶಪಡಿಸಿಕೊಳ್ಳುವ ಅಥವಾ ನಕಲಿ ಮತ ಚಲಾವಣೆಗೆ ಯತ್ನದಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
‘ಇಂಥ ಚುನಾವಣಾ ಅಕ್ರಮಗಳು ಕಾನೂನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತವೆ. ಮತ ಚಲಾಯಿಸುವ ಸ್ವಾತಂತ್ರ್ಯ ಕೂಡ ವಾಕ್ ಸ್ವಾತಂತ್ರ್ಯದ ಭಾಗವೇ ಆಗಿದೆ ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರಿರುವ ನ್ಯಾಯಪೀಠ ಹೇಳಿದೆ.
ಜಾರ್ಖಂಡ್ನಲ್ಲಿ ಚುನಾವಣೆ ವೇಳೆ ಮತದಾನ ಕೇಂದ್ರದಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಪೀಠ, ಈ ಪ್ರತಿಪಾದನೆ ಮಾಡಿದೆ.
‘ಮತದಾರರಿಗೆ ಅವರ ಆಯ್ಕೆಯಂತೆ ಮತ ಚಲಾಯಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುವುದೇ ಚುನಾವಣಾ ವ್ಯವಸ್ಥೆಯ ತಿರುಳು. ಈ ಹಿನ್ನೆಲೆಯಲ್ಲಿ ಮತ ಕೇಂದ್ರಗಳನ್ನು ವಶಪಡಿಸಿಕೊಳ್ಳುವ, ನಕಲಿ ಮತ ಚಲಾಯಿಸುವ ಯತ್ನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಅಗತ್ಯ’ ಎಂದು ನ್ಯಾಯಪೀಠ ಹೇಳಿದೆ.
‘ಮತದಾನಕ್ಕೆ ಸಂಬಂಧಿಸಿ ಗೌಪ್ಯವನ್ನು ಕಾಪಾಡುವುದು, ಮತದಾರ ನಿರ್ಭೀತಿಯಿಂದ ಮತ ಚಲಾವಣೆ ಮಾಡುವುದನ್ನು ಖಾತರಿ ಪಡಿಸುವುದು ಸಹ ಅಷ್ಟೇ ಮುಖ್ಯ. ಒಂದು ವೇಳೆ ಯಾರಿಗೆ ಮತ ಹಾಕಲಾಗಿದೆ ಎಂಬುದು ಬಹಿರಂಗಗೊಂಡಿದ್ದೇ ಆದಲ್ಲಿ, ಅದು ಮತದಾರರನ್ನು ಬಲಿಪಶು ಮಾಡಿದಂತಾಗುತ್ತದೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.