ಧುಬ್ರಿ(ಅಸ್ಸಾಂ): ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ–ಬಾಂಗ್ಲಾದೇಶದ ಗಡಿಯಲ್ಲಿ ಬಿಎಸ್ಎಫ್ ಪಡೆಯು ಕಟ್ಟೆಚ್ಚರವಹಿಸಿದೆ.
‘ಸ್ವಾತಂತ್ರ್ಯ ದಿನಾಚರಣೆಯಂದು ನೆರೆ ರಾಷ್ಟ್ರದ ಇಸ್ಲಾಮಿಕ್ ಭಯೋತ್ಪಾದಕರು ಮತ್ತು ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿನ ದಂಗೆಕೋರರು ದಾಳಿಗಳನ್ನು ನಡೆಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಭಾರತ–ಬಾಂಗ್ಲಾದೇಶದ ಗಡಿಯಲ್ಲಿ ‘ಹೈ ಅಲರ್ಟ್’ ಘೋಷಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಅಸ್ಸಾಂನ ಭಾರತ-ಬಾಂಗ್ಲಾದೇಶ ಗಡಿ ಮತ್ತು ಪಶ್ಚಿಮ ಬಂಗಾಳದ ಕೂಚ್ಬಿಹಾರ್ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ’ ಎಂದು ಬಿಎಸ್ಎಫ್ನ ಪ್ರಾದೇಶಿಕ ಕೇಂದ್ರದ ಡಿಐಜಿ ಶೈಲೇಂದ್ರ ಕುಮಾರ್ ಸಿನ್ಹಾ ಅವರು ಶನಿವಾರ ಹೇಳಿದರು.
‘ಅಂತರರಾಷ್ಟ್ರೀಯ ಗಡಿಯಲ್ಲಿಬಿಎಸ್ಎಫ್ ‘ಆಪರೇಷನ್ ಅಲರ್ಟ್’ ಆರಂಭಿಸಿದೆ. ಈ ಕಾರ್ಯಾಚರಣೆಯಲ್ಲಿ ಅರೆಸೇನಾ ಪಡೆಯ ಎಲ್ಲಾ ವಿಭಾಗಗಳ ಅಧಿಕಾರಿಗಳು, ಸೈನಿಕರು ಭಾಗವಹಿಸಿದ್ದಾರೆ. ಇದು ಆಗಸ್ಟ್ 16ರವರೆಗೆ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.