ನವದೆಹಲಿ: ರೈಲ್ವೆ ಸಚಿವರಾಗಿದ್ದ ವೇಳೆ ನಡೆದ ಉದ್ಯೋಗಕ್ಕಾಗಿ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್, ಅವರ ಪತ್ನಿ ರಾಬ್ಡಿ ದೇವಿ ಹಾಗೂ ಇತರ 14 ಮಂದಿ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಚಾರ್ಜ್ಶೀಟ್ ಸಲ್ಲಿಸಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಲಾಲು ಅವರ ಮಗಳು ಮೀಸಾ ಭಾರತಿ ಮತ್ತು ರೈಲ್ವೆ ಇಲಾಖೆಯ ಮಾಜಿ ಪ್ರಧಾನ ವ್ಯವಸ್ಥಾಪಕ ಅವರನ್ನೂ ಹಗರಣದಲ್ಲಿ ಆರೋಪಿಗಳೆಂದು ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್ಶೀಟ್ನಲ್ಲಿ ಹೆಸರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಉದ್ಯೋಗಕ್ಕಾಗಿ ನಿವೇಶನ ಹಗರಣಕ್ಕೆ ಸಂಬಂಧಿಸಿದ ದೂರನ್ನು ಮೇ 18ರಂದು ಎಫ್ಐಆರ್ ಆಗಿ ಪರಿವರ್ತಿಸಲಾಗಿತ್ತು. ಈ ಬಗ್ಗೆ ಸಿಬಿಐ 2021ರ ಸೆ. 23ರಂದು ಪ್ರಾಥಮಿಕ ವಿಚಾರಣೆಯನ್ನು ನಡೆಸಿತ್ತು.
ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಕುಟುಂಬದ ಸದಸ್ಯರು ಪಟ್ನಾದಲ್ಲಿ ಸುಮಾರು 1.05 ಲಕ್ಷ ಚದರ ಅಡಿಗಳಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದೂ ಸಿಬಿಐ ಆರೋಪಿಸಿದೆ.
ರೈಲ್ವೆ ಇಲಾಖೆಯಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದ ಮೂರು ದಿನಗಳಲ್ಲೇ ಗ್ರೂಡ್ ಡಿ ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು. ಈ ಅಭ್ಯರ್ಥಿಗಳು ತಮ್ಮ ಅಥವಾ ಅವರ ಕುಟುಂಬ ಸದಸ್ಯರು ತಮ್ಮ ಭೂಮಿಯನ್ನು ವರ್ಗಾಯಿಸಿದಾಗ ಅವರ ಉದ್ಯೋಗವನ್ನು ಕ್ರಮಬದ್ಧಗೊಳಿಸಲಾಗಿತ್ತು ಎಂದೂ ಸಿಬಿಐ ತಿಳಿಸಿದೆ.