ರಾಯಪುರ: ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ಮಾಡಲಿರುವ ಕಾರಣ, ರಾಜ್ಯದಲ್ಲಿ ಆ ದಿನವನ್ನು ‘ಪಾನಮುಕ್ತ’ ದಿನ ಎಂದು ಘೋಷಿಸಿಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರು ಹೇಳಿದ್ದಾರೆ.
‘ಡಿಸೆಂಬರ್ 25ರಿಂದ ಜನವರಿ 2ರ ವರೆಗೆ ನಾವು ಉತ್ತಮ ಆಡಳಿತ ದಿನವನ್ನು ಆಚರಿಸಿದೆವು. ರಾಮರಾಜ್ಯವು ಉತ್ತಮ ಆಡಳಿತಕ್ಕೆ ಮಾದರಿಯಾಗಿದೆ’ ಎಂದು ಅವರು ಹೇಳಿದರು.
‘ಛತ್ತೀಸಗಢವು ಶ್ರೀರಾಮನ ತಾಯಿಯ ತವರು ಆಗಿರುವುದು ನಮ್ಮ ಅದೃಷ್ಟ. ಜ.22ರಂದು ರಾಜ್ಯದ ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಲಿದೆ. ಆ ದಿವಸ ಎಲ್ಲೆಡೆ ಹಣತೆಗಳನ್ನು ಬೆಳಗಿಸಲಾಗುತ್ತದೆ. ರಾಜ್ಯದ ಅಕ್ಕಿ ಗಿರಣಿ ಸಂಘವು ಈಗಾಗಲೇ 300 ಟನ್ ಸುವಾಸನೆಯುಕ್ತ ಅಕ್ಕಿಯನ್ನು ಅಯೋಧ್ಯೆಗೆ ಕಳಿಸಿದೆ. ತರಕಾರಿ ಬೆಳೆಗಾರರು ತರಕಾರಿಯನ್ನು ಕಳಿಸಲಿದ್ದಾರೆ’ ಎಂದು ವಿಷ್ಣುದೇವ್ ಹೇಳಿದರು.