ರಾಯಪುರ(ಛತ್ತೀಸಗಡ): ವಿದ್ಯುತ್ ಆಘಾತದಿಂದ ಹುಲಿಯೊಂದು ಮೃತಪಟ್ಟಿದ್ದು, ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಇರಿಸಿ, ಹುಲಿ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ಐವರನ್ನು ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ.
ಸಾರಂಗಡ–ಬಿಲಾಯಿಗಡ ಜಿಲ್ಲೆಯ ಗೋಮರ್ಡಾ ವನ್ಯಜೀವಿಧಾಮದಲ್ಲಿ ಈ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ, ಅರಣ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇಬ್ಬರು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
‘ಕರಡಿಯನ್ನು ಬೇಟೆಯಾಡುವುದಕ್ಕಾಗಿ ಘೋರ್ಗಂಟಿ ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಹಾಕಿದ್ದೆವು. ತಂತಿಯನ್ನು ಸ್ಪರ್ಶಿಸಿ ಹುಲಿ ಮೃತಪಟ್ಟಿತು. ನಂತರ ಕಳೇಬರವನ್ನು ಲಾಟ್ ನದಿ ಬಳಿಯ ಅರಣ್ಯ ಪ್ರದೇಶದಲ್ಲಿ ಹೂತಿದ್ದಾಗಿ ಬಂಧಿತರು ವಿಚಾರಣೆ ವೇಳೆ ತಿಳಿಸಿದ್ದಾರೆ. ಹುಲಿಯ ಕಳೇಬರವನ್ನು ಶುಕ್ರವಾರ ಹೊರ ತೆಗೆಯಲಾಗಿದೆ’ ಎಂದು ತಿಳಿಸಿದ್ದಾರೆ.