ಬಿಕನೇರ್ (ರಾಜಸ್ಥಾನ): ‘ಕಾಂಗ್ರೆಸ್ ಎಂದರೆ ‘ಸುಳ್ಳಿನ ಸಂತೆ ಹಾಗೂ ದೋಚುವ ಅಂಗಡಿ’ ಇದ್ದಂತೆ. ರಾಜ್ಯದಲ್ಲಿರುವ ಅಶೋಕ್ ಗೆಹಲೋತ್ ನೇತೃತ್ವದ ಸರ್ಕಾರದ ವಿರುದ್ಧ ಜನರಿಗಿರುವ ಆಕ್ರೋಶ ಇದನ್ನು ಸಾಭೀತುಪಡಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೋರಂಗದೇಸರ್ನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರ, ಅಪರಾಧ ಹಾಗೂ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ತನ್ನದೇ ದಾರಿ ಹೊಂದಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಆ ಪಕ್ಷ ತನ್ನದೇ ಆದ ಘೋರ ರೂಪವನ್ನು ಪಡೆದುಕೊಂಡಿದೆ’ ಎಂದರು.
‘ರಾಜಸ್ಥಾನವು ಅತ್ಯಾಚಾರ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ರಕ್ಷಕರೇ ಇಲ್ಲಿ ಭಕ್ಷಕರಾಗಿದ್ದಾರೆ. ಅತ್ಯಾಚಾರಿ ಹಾಗೂ ಕೊಲೆಗಡುಕರನ್ನು ರಕ್ಷಿಸುವುದರಲ್ಲೇ ಸರ್ಕಾರ ಮುಳುಗಿದೆ’ ಎಂದು ಆರೋಪಿಸಿದರು.