ನವದೆಹಲಿ:2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಪಕ್ಷದ ಸಮನ್ವಯ ಸಮಿತಿ, ಪ್ರಚಾರ ಹಾಗೂ ಪ್ರಣಾಳಿಕೆ ಸಮಿತಿಗೆ ಮುಖ್ಯಸ್ಥರನ್ನು ನೇಮಕ ಮಾಡಿದ್ದಾರೆ.
ಸಮನ್ವಯ ಸಮಿತಿಗೆ ಎ.ಕೆ. ಆಂಟನಿ, ಪ್ರಣಾಳಿಕೆ ಸಮಿತಿಗೆ ಪಿ. ಚಿದಂಬರಂ, ಪ್ರಚಾರ ಸಮಿತಿಗೆ ಆನಂದ ಶರ್ಮಾ ಅವರು ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಜೈರಾಂ ರಮೇಶ್, ಎಂ.ವಿ. ರಾಜೀವ್ ಗೌಡ ಮತ್ತು ಪವನ್ ಖೇರಾ ಅವರನ್ನು ಕ್ರಮವಾಗಿ ಈ ಸಮಿತಿಗಳ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
ಪ್ರಣಾಳಿಕೆ ಸಮಿತಿ ಸದಸ್ಯರು ಮುಂದಿನ ವಾರದಿಂದ ದೇಶದಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಜನರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಸಮಿತಿ ಸದಸ್ಯರೊಬ್ಬರು ಹೇಳಿದರು.