ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಲಡಾಖ್ ಪ್ರವಾಸದ ವೇಳೆ ಲೇಹ್ನ ಖರ್ದುಂಗ್ ಲಾಗೆ ಭೇಟಿ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಭಾನುವಾರ ಲೇಹ್ನ ಪ್ಯಾಂಗಾಂಗ್ ಸರೋವರದ ಬಳಿ ತಮ್ಮ ತಂದೆ ರಾಜೀವ್ ಗಾಂಧಿ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದರು. ಆಗಸ್ಟ್ 25 ರವರೆಗೆ ರಾಹುಲ್ ಲಡಾಖ್ನಲ್ಲಿ ಇರಲಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಭಾರತ ಮತ್ತು ಚೀನಾ ನಡುವಿನ ಗಡಿ ವಿಚಾರ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
‘ಲಡಾಖ್ನ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಮೋದಿ ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು’ ಎಂದು ಕಿಡಿಕಾರಿದ್ದರು.
‘ಚೀನಾ ಸೇನೆ ಲಡಾಖ್ನ ಹುಲ್ಲುಗಾವಲನ್ನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರು ತಲ್ಲಣಗೊಂಡಿದ್ದಾರೆ’ ಎಂದು ತಿಳಿಸಿದ್ದರು.
‘ಚೀನಾ ಸೇನೆ ಒಳನುಸುಳಿ ತಮ್ಮ ಹುಲ್ಲುಗಾವಲು ವಶಪಡಿಸಿಕೊಂಡಿದೆ. ಅಲ್ಲಿಗೆ ಪ್ರವೇಶಿಸಲು ತಮಗ್ಯಾರಿಗೂ ಅವಕಾಶವಿಲ್ಲ ಎಂದು ಇಲ್ಲಿನ ಜನರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದಿದ್ದರು.
‘ಭಾರತ್ ಜೋಡೊ ಯಾತ್ರೆಯ ವೇಳೆಯೇ ನಾನು ಲಡಾಖ್ಗೆ ಬರಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಇಲ್ಲಿಗೆ ಭೇಟಿ ನೀಡುವ ಯೋಜನೆ ಕೈಬಿಡಬೇಕಾಯಿತು. ಆದ್ದರಿಂದ ಸಂಪೂರ್ಣ ಪ್ರಮಾಣದ ಪ್ರವಾಸ ಕೈಗೊಳ್ಳಲೆಂದು ಈಗ ಇಲ್ಲಿಗೆ ಬಂದಿದ್ದೇನೆ’ ಎಂದು ಅವರು ವಿವರಿಸಿದ್ದರು.
‘ನಾನು ಈಗಾಗಲೇ ಪ್ಯಾಂಗಾಂಗ್ಗೆ ಬಂದಿದ್ದೇನೆ. ನಂತರ, ನುಬ್ರಾ ಮತ್ತು ಕಾರ್ಗಿಲ್ಗೆ ಭೇಟಿ ನೀಡಲಿದ್ದೇನೆ. ಜನರ ಕಷ್ಟಗಳನ್ನು ಆಲಿಸುವುದು ನನ್ನ ಉದ್ದೇಶ’ ಎಂದು ತಿಳಿಸಿದ್ದರು.