ತಿರುವನಂತಪುರ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಸಂಸದ ಶಶಿ ತರೂರ್ ಅವರು, ಚುನಾವಣೆಗಳಲ್ಲಿ ಸ್ಪರ್ಧಿಸಲು ಯುವಕರಿಗೆ ಅವಕಾಶ ಕಲ್ಪಿಸಬೇಕು ಎಂದು ಇತ್ತೀಚೆಗೆ ಹೇಳಿದ್ದಾರೆ. ಇದರೊಂದಿಗೆ ಅವರು ಮುಂಬರುವ ಲೋಕಸಭೆ ಚುನಾವಣೆ ಬಳಿಕ ಮತ್ತೆ ಸ್ಪರ್ಧಿಸುವುದಿಲ್ಲ ಎನ್ನುವ ಸುಳಿವು ನೀಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
'ಒಂದು ಹಂತದಲ್ಲಿ ಯುವಜನರಿಗೆ ಅವಕಾಶ ಕಲ್ಪಿಸುವ ಸಮಯ ಬರುತ್ತದೆ ಎಂದು ನಂಬಿದ್ದೇನೆ. ಅದು ನನ್ನ ಆಲೋಚನೆಯೂ ಹೌದು. ಅದೇರೀತಿ ರಾಜಕೀಯದಲ್ಲಿ, 'ಆಗುವುದಿಲ್ಲ ಎಂಬುದಾಗಿ ಎಂದೂ ಹೇಳಬೇಡ' ಎಂಬ ಇನ್ನೊಂದು ಮಾತಿದೆ' ಎಂದು ಹೇಳಿದ್ದಾರೆ.
ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ತಿರುವನಂತಪುರ ಸಂಸದ ತರೂರ್, 2024ರ ಲೋಕಸಭೆ ಚುನಾವಣೆಯು ಬಹುಶಃ ತಮ್ಮ ಪಾಲಿಗೆ ಕೊನೇ ಸ್ಪರ್ಧೆಯಾಗಬಹುದು ಎಂದಿದ್ದರು.
ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನಾನು ಸಾಧ್ಯವೇ ಇಲ್ಲ ಎಂದು ಹೇಳಿಲ್ಲ. ಇದು ನನ್ನ ಕೊನೆಯ ಚುನಾವಣೆ ಆಗಬಹುದು ಎನಿಸುತ್ತದೆ ಎಂದಷ್ಟೇ ಹೇಳಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದರೆ ಅದು ತಮ್ಮ ಕೊನೇ ಚುನಾವಣೆ ಎಂಬಂತೆ, ಜನರ ಒಳಿತಿಗಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
2009ರಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ತರೂರ್, ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. 2014 ಹಾಗೂ 2019ರಲ್ಲಿಯೂ ಜಯ ಗಳಿಸಿ ಹ್ಯಾಟ್ರಿಕ್ ಸಾಧಿಸಿದ್ದರು.