ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

370ನೇ ವಿಧಿಯನ್ನು ಕಾಂಗ್ರೆಸ್ 70 ವರ್ಷಗಳ ಕಾಲ ಸಂರಕ್ಷಿಸಿದೆ: ಅಮಿತ್ ಶಾ

Published 19 ಮೇ 2024, 12:08 IST
Last Updated 19 ಮೇ 2024, 12:08 IST
ಅಕ್ಷರ ಗಾತ್ರ

ಜೌನ್‌ಪುರ (ಉತ್ತರ ಪ್ರದೇಶ): ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ 70 ವರ್ಷಗಳ ಕಾಲ ಸಂರಕ್ಷಿಸಿದವು. ಇದರಿಂದಾಗಿ ದೇಶದಲ್ಲಿ ಭಯೋತ್ಪಾದನೆ ಹೆಚ್ಚಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.

ಉತ್ತರ ಪ್ರದೇಶದ ಜೌನ್‌ಪುರದ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಪಿ. ಸರೋಜ್‌ ಪರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಅವರು ಭಾನುವಾರ ಮಾತನಾಡಿದರು.

ಜನರು ಮೋದಿ ಅವರನ್ನು 2ನೇ ಬಾರಿಗೆ ಪ್ರಧಾನಿಯನ್ನಾಗಿ ಆರಿಸಿದ್ದರಿಂದ ಅವರು 2019ರ ಆಗಸ್ಟ್ 5ರಂದು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದರು. ಶ್ರೀನಗರದ ಲಾಲ್‌ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸೇನೆ ತೆಗೆದುಕೊಂಡು ಹೋಗುವ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಆದರೆ ಈಗ ಅಲ್ಲಿ ಶ್ರೀಕೃಷ್ಣ ಪರಮಾತ್ಮನ ಶೋಭಯಾತ್ರೆ ಕೂಡ ನಡೆಯುತ್ತಿದೆ ಎಂದರು.

'ಕಾಂಗ್ರೆಸ್ ನಾಯಕರು ದೇಶವನ್ನು ದಕ್ಷಿಣ ಮತ್ತು ಉತ್ತರ ಭಾರತ ಎಂದು ಎರಡು ಭಾಗಗಳಾಗಿ ವಿಂಗಡಿಸಬೇಕೆಂದು ಹೇಳುತ್ತಿದ್ದಾರೆ. ಒಂದು ಬಾರಿ ದೇಶವನ್ನು ವಿಭಜಿಸಿದರೂ ಅವರಿಗೆ ತೃಪ್ತಿಯಾಗಿಲ್ಲ. ಈಗೆ ಮತ್ತೊಮ್ಮೆ ದೇಶವನ್ನು ವಿಭಜಿಸಲು ಬಯಸುತ್ತಿದ್ದಾರೆ. ಆದರೆ ಬಿಜೆಪಿ ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ' ಎಂದು ಅವರು ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಪಡಿಸುವುದಾಗಿ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಅಮಿತ್‌ ಶಾ ಹೇಳಿದರು.

'ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಅವರಿಗೆ ನಾನು ಕೇಳಲು ಬಯಸುತ್ತೇನೆ. ನಿಮ್ಮ ಸರ್ಕಾರ 10 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಆ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ನಿಮ್ಮ ಕೊಡುಗೆ ಏನು?. 10 ವರ್ಷಗಳಲ್ಲಿ ಉತ್ತರ ಪ್ರದೇಶಕ್ಕೆ ನೀವು ₹ 4.9 ಲಕ್ಷ ಕೋಟಿ ನೀಡಿದರೆ, ನರೇಂದ್ರ ಮೋದಿ ₹ 19.11 ಲಕ್ಷ ಕೋಟಿ ನೀಡಿದ್ದಾರೆ' ಎಂದರು.

ಮೇ 25 ರಂದು ಮಚ್ಲಿಶಹರ್ ‌‌ಲೋಕಸಭಾ ಕ್ಷೇತ್ರದಲ್ಲಿ 6ನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರದಿಂದ 12 ಅಭ್ಯರ್ಥಿಗಳು ಕಣದಲ್ಲಿದ್ದು , ಬಿಜೆಪಿಯ ಬಿ.ಪಿ ಸರೋಜ್‌ ಮತ್ತು ಎಸ್‌ಪಿಯ ಪ್ರಿಯಾ ಸರೋಜ್‌ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT