ಕೋಡಾತರಾಯಿ(ಛತ್ತೀಸ್ಗಢ): ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ಜನಗಣತಿ ನಡೆಸಬೇಕೆಂದು ಬಯಸುತ್ತದೆ. ಇದರಿಂದಾಗಿ, ಹಿಂದುಳಿದ ವರ್ಗಗಳ ಸ್ಥಿತಿಗತಿ ತಿಳಿಯಲಿದ್ದು, ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೇಶವನ್ನು ಇಬ್ಭಾಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಖರ್ಗೆ, 2024ರ ಚುನಾವಣೆಯಲ್ಲಿ ಅವರ ಆಟ ನಡೆಯುವುದಿಲ್ಲ. ಜನ ಜಾಗೃತರಾಗಿದ್ದಾರೆ ಎಂದರು.
ರಾಯಗಢ ಜಿಲ್ಲೆಯ ಕೋಡಾತರಾಯಿಯಲ್ಲಿ ಕಾಂಗ್ರೆಸ್ನ ‘ಭರೋಸೆ ಕ ಸಮ್ಮೇಳನ್’ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,
ಬಿಜೆಪಿ ಮತ್ತು ಆರೆಸ್ಸೆಸ್ ಮಹಿಳಾ ವಿರೋಧಿ ಸಿದ್ಧಾಂತವನ್ನು ಹೊಂದಿವೆ. ಒಂದೊಮ್ಮೆ ಮಹಿಳೆಯರ ಬಗ್ಗೆ ಅವರಿಗೆ ಕಾಳಜಿ ಇದ್ದರೆ ಹಿಂದುಳಿದ ವರ್ಗಗಳ, ಬಡ ಮಹಿಳೆಯರನ್ನು ಮಹಿಳಾ ಮೀಸಲಾತಿ ಮಸೂದೆ ಅಡಿಯಲ್ಲಿ ತರಲಿ ಎಂದಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ವಿರೋಧಿಸಿತ್ತು ಎಂದು ಬಿಜೆಪಿ ಹೇಳುತ್ತಿದೆ. ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಕುರಿತಂತೆ ಸಂವಿಧಾನ ತಿದ್ದುಪಡಿ ತಂದವರು ಯಾರು? ಕಾಂಗ್ರೆಸ್ ಎಂದು ಹೇಳಿದ್ದಾರೆ.
ಹಿಂದಿನ ಜನಸಂಘ, ಬಿಜೆಪಿ ಅಥವಾ ಆರೆಸ್ಸೆಸ್ ಸಿದ್ಧಾಂತಗಳು ಮಹಿಳಾ ವಿರೋಧಿಯೇ ಆಗಿವೆ. ಮಹಿಳೆಯರ ಬೆಳವಣಿಗೆ ಅವರಿಗೆ ಬೇಕಿಲ್ಲ ಎಂದಿದ್ದಾರೆ.
ಅವರಿಗೆ(ಬಿಜೆಪಿ) ನಿಜವಾಗಿಯೂ ಮಹಿಳೆಯರು, ಹಿಂದುಳಿದ ವರ್ಗ ಮತ್ತು ಬಡವರ ಬಗ್ಗೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಇರುವ ಬಹುಮತ ಬಳಸಿಕೊಂಡು ಕೂಡಲೇ ಜಾರಿ ಮಾಡಲಿ. ಮಸೂದೆಯಲ್ಲಿರುವ ನಿಬಂಧನೆಗಳ ಪ್ರಕಾರ, 2034ರವರೆಗೂ ಮಸೂದೆ ಜಾರಿಗೆ ಬರುವುದಿಲ್ಲ ಎಂದಿದ್ದಾರೆ.