ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಗಳು ಟೇಪ್‌ ರೆಕಾರ್ಡರ್‌ ರೀತಿ ವರ್ತಿಸಬಾರದು: ಸುಪ್ರೀಂ ಕೋರ್ಟ್‌

ಸರ್ಕಾರಿ ವಕೀಲರು ಉದಾಸೀನತೆ ತೋರಿದ ಸಂದರ್ಭಗಳಲ್ಲಿ ನ್ಯಾಯಾಲಯವೇ ವಿಚಾರಣೆ ಪ್ರಕ್ರಿಯೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಸತ್ಯ ಹೊರಬರುವಂತೆ ನೋಡಿಕೊಳ್ಳಬೇಕು
Published 5 ಮೇ 2024, 12:22 IST
Last Updated 5 ಮೇ 2024, 12:22 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯಗಳ ಭಾಗೀದಾರಿಕೆ ಇರಬೇಕು. ಸಾಕ್ಷಿಗಳು ಏನೇ ಹೇಳಿಕೆ ನೀಡಿದರೂ ಅದನ್ನು ಮುದ್ರಿಸಿಕೊಳ್ಳುವ ‘ಟೇಪ್‌ ರೆಕಾರ್ಡರ್‌’ನಂತೆ ವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕ್ರಿಮಿನಲ್‌ ಮೊಕದ್ದಮೆಗಳಲ್ಲಿ ಸಲ್ಲಿಸಲಾಗುವ ಮೇಲ್ಮನವಿ ವಿಚಾರಣೆ ವೇಳೆ, ಸರ್ಕಾರಿ ವಕೀಲರು ಪ್ರತಿಕೂಲ ಸಾಕ್ಷ್ಯ ಹೇಳುವ ಸಾಕ್ಷಿಗಳನ್ನು ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಪಾಟೀಸವಾಲಿಗೆ ಒಳಪಡಿಸುತ್ತಿಲ್ಲ ಎಂದೂ ಸುಪ್ರೀಂ ಕೋರ್ಟ್‌ ವಿಷಾದಿಸಿದೆ.

1995ರಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ದೃಢಪಡಿಸಿ ದೆಹಲಿ ಹೈಕೋರ್ಟ್‌ ತೀರ್ಪು ನೀಡಿತ್ತು. ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದು ತೀರ್ಪು ಪ್ರಕಟಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ.

ಸರ್ಕಾರಿ ವಕೀಲರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ವ್ಯಕ್ತಿಯ ಅರ್ಹತೆಯೊಂದೇ ಮಾನದಂಡವಾಗಿರಬೇಕು.
ಸುಪ್ರೀಂ ಕೋರ್ಟ್‌

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ನ್ಯಾಯದಾನ ಪ್ರಕ್ರಿಯೆ ಭಾಗವಾಗಿ, ನ್ಯಾಯಾಧೀಶರು ವಿಚಾರಣೆಯ ಮೇಲ್ವಿಚಾರಣೆ ಮಾಡಬೇಕು. ಒಂದು ವೇಳೆ ಸರ್ಕಾರಿ ವಕೀಲರು ಉದಾಸೀನತೆ ತೋರಿದ ಸಂದರ್ಭಗಳಲ್ಲಿ ನ್ಯಾಯಾಲಯವೇ ವಿಚಾರಣೆ ಪ್ರಕ್ರಿಯೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಸತ್ಯ ಹೊರಬರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.

ಕ್ರಿಮಿನಲ್‌ ನ್ಯಾಯ ವ್ಯವಸ್ಥೆಗೆ ಪ್ರಾಸಿಕ್ಯೂಷನ್‌ ಮತ್ತು ನ್ಯಾಯಾಂಗದ ನಡುವಿನ ಸಂಬಂಧವೇ ಆಧಾರ. ಹೀಗಾಗಿ, ಸರ್ಕಾರಿ ವಕೀಲರ ನೇಮಕಾತಿಯಂತಹ ವಿಷಯದಲ್ಲಿ ಒಂದಿನಿತೂ ರಾಜಕೀಯ ಬೆರೆಸಬಾರದು ಎಂದು ಸುಪ್ರೀಂ ಕೋರ್ಟ್‌ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದೆ ಎಂದೂ ನ್ಯಾಯಪೀಠ ಹೇಳಿದೆ.

ನ್ಯಾಯಪೀಠ ಹೇಳಿದ್ದೇನು?

  • ಪ್ರತಿಕೂಲ ಸಾಕ್ಷ್ಯ ನುಡಿಯುವ ಸಾಕ್ಷಿಗಳನ್ನು ವಿಸ್ತೃತವಾದ ಪಾಟೀಸವಾಲಿಗೆ ಒಳಪಡಿಸಿ, ಸತ್ಯವನ್ನು ನಿರೂಪಿಸುವುದು ಸರ್ಕಾರಿ ವಕೀಲರ ಕರ್ತವ್ಯ. 

  • ಪ್ರಾಸಿಕ್ಯೂಷನ್‌ನಿಂದಾಗುವ ಕರ್ತವ್ಯಲೋಪ ಹಾಗೂ ಅದರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ನ್ಯಾಯಾಲಯಗಳಿಗೆ ಅರಿವು ಇರಬೇಕು

  • ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಸಾಕ್ಷಿಗಳಿಂದ ಬಯಲಿಗೆಳೆಯುವ ಕೆಲಸವನ್ನು ನ್ಯಾಯಾಧೀಶರು ಮಾಡಬೇಕು

  • ಒಬ್ಬ ವ್ಯಕ್ತಿ ವಿರುದ್ಧ ಎಸಗುವ ಅಪರಾಧವು ಇಡೀ ಸಮಾಜದ ವಿರುದ್ಧದ ಅಪರಾಧವೇ ಆಗುತ್ತದೆ. ಹೀಗಾಗಿ, ಸರ್ಕಾರಿ ವಕೀಲರಾಗಲಿ, ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಾಗಲಿ ಪ್ರಕರಣ ಕುರಿತು ಅಸಡ್ಡೆ ತೋರಬಾರದು

  • ಸರ್ಕಾರಿ ವಕೀಲನಾಗಿ ನೇಮಕಗೊಳ್ಳುವ ವ್ಯಕ್ತಿ ಹುದ್ದೆಗೆ ತಕ್ಕವನಾಗಿರುವ ಜೊತೆಗೆ ಉತ್ತಮ ನಡತೆ ಹಾಗೂ ಪ್ರಾಮಾಣಿಕತೆ ಹೊಂದಿದವನಾಗಿರಬೇಕು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT