ಕಣ್ಣೂರು: ಕೇರಳದ ಆಡಳಿತಾರೂಢ ಸಿಪಿಎಂ ಪಕ್ಷದ ಮೂವರು ಕಾರ್ಯಕರ್ತರ ಮೇಲೆ 10 ಜನರ ಗುಂಪೊಂದು ದಾಳಿ ನಡೆಸಿ, ಮೂವರನ್ನು ಥಳಿಸಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಭಾನುವಾರ ರಾತ್ರಿ ಇಲ್ಲಿನ ಮಟ್ಟನ್ನೂರಿನ ಅಯ್ಯಲ್ಲೂರ್ನಲ್ಲಿರುವ ಸ್ಥಳೀಯ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರಾದ ಸುನೋಬ್, ರಿಜಿನ್ ಮತ್ತು ಲಥೀಶ್ ಎಂಬುವವರು ಕುಳಿತುಕೊಂಡಿದ್ದರು. ಆಗ 10 ಜನರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ದಾಳಿಯ ಹಿಂದೆ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಇದ್ದಾರೆ ಎಂದು ಸಿಪಿಎಂ ಆರೋಪಿಸಿದೆ. ಆದರೆ, ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಟ್ಟನ್ನೂರು ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಊಹೆಯ ಪ್ರಕಾರ ದಾಳಿಯ ಹಿಂದೆ ರಾಜಕೀಯ ದ್ವೇಷವಿದೆ ಎಂದು ಶಂಕಿಸಲಾಗಿದೆ. ತಮ್ಮ ಮೇಲೆ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.