ನವದೆಹಲಿ: ಬಂಗಾಳ ಕೊಲ್ಲಿಯ ತೀವ್ರ ವಾಯುಭಾರ ಕುಸಿತ ಒಡಿಶಾ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೂ ತಟ್ಟಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ ತಿತ್ಲಿ ಎಂಬ ಹೆಸರಿಡಲಾಗಿದೆ. ಇದರಿಂದ ಎರಡು ರಾಜ್ಯಗಳು ಸೇರಿದಂತೆ ವಿವಿಧೆಡೆ ಮಳೆಯ ಆರ್ಭಟ ಶುರುವಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಅಲ್ಲದೇ ಒಡಿಶಾದ ಗೋಪಾಲಪುರ ಹಾಗೂ ಕಾಳಿಂಗಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ. ಗೋಪಾಲಪುರದಿಂದ ಆಗ್ನೇಯಕ್ಕೆ 560 ಕಿ.ಮೀ. ದೂರದಲ್ಲಿ ಹಾಗೂ ಆಂಧ್ರಪ್ರದೇಶದ ಕಾಳಿಂಗಪಟ್ಟಣದ ಪೂರ್ವ ಆಗ್ನೇಯಕ್ಕೆ 480ಕಿ.ಮೀ ತಿತ್ಲಿ ಚಂಡಮಾರುತ ದೃಷ್ಟಿ ನೆಟ್ಟಿದೆ.
ರಜೆ ಘೋಷಣೆ:
ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಒಡಿಶಾ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ರಾಜ್ಯದ ನಾಲ್ಕು ಜಿಲ್ಲೆಗಳಾದ ಗಂಜಮ್ ಗಜಪತಿ, ಪುರಿ, ಜಗತ್ಸಿಂಗಪುರದ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.
ವೈದ್ಯಕೀಯ ಸೌಲಭ್ಯ, ಮನೆಗಳ ನಿರ್ಮಾಣ ಸೇರಿದಂತೆ ರಾಜ್ಯದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.