ನವದೆಹಲಿ: ಬಹುಜನ ಸಮಾಜ ಪಾರ್ಟಿಯಿಂದ ಅಮಾನತುಗೊಂಡಿರುವ ಲೋಕಸಭಾ ಸಂಸದ ಡ್ಯಾನಿಶ್ ಅಲಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ. ಉತ್ತರ ಪ್ರದೇಶದ ಅಮ್ರೋಹ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ನಂ. 10, ಜನಪಥ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿದ ಡ್ಯಾನಿಶ್ ಅಲಿ, ಅವರ ‘ಆಶೀರ್ವಾದ’ ಪಡೆದರು ಎಂದು ಮೂಲಗಳು ತಿಳಿಸಿವೆ.
‘ತ್ಯಾಗಮಯಿಯಾದ ಸೋನಿಯಾ ಗಾಂಧಿ ಅವರ ಆಶೀರ್ವಾದ ಪಡೆದು ಧನ್ಯನಾಗಿದ್ದೇನೆ. ಲೋಕಸಭಾ ಚುನಾವಣೆಯಲ್ಲಿನ ನನ್ನ 2ನೇ ಸ್ಪರ್ಧೆ ಅಮ್ರೋಹದಿಂದ ನಡೆಯಲಿದೆ. ದೇಶದ ಬಡ ಜನರ ಪರವಾಗಿ ಸೋನಿಯಾ ಅವರ ಹೃದಯ ಮಿಡಿಯುತ್ತಿದೆ. ರಾಷ್ಟ್ರೀಯ ಸಲಹಾ ಮಂಡಳಿಯ ಮುಖ್ಯಸ್ಥೆಯಾಗಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಬಡವರ ಕಲ್ಯಾಣಕ್ಕಾಗಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ ಹಕ್ಕು ಹಾಗೂ ಆಹಾರ ಭದ್ರತೆ ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ತಮ್ಮ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿರುವ ಕಾಂಗ್ರೆಸ್, ಅಮ್ರೋಹ ಕ್ಷೇತ್ರಕ್ಕಾಗಿ ಚರ್ಚೆ ನಡೆಸಿದೆ. ಇದರ ಭಾಗವಾಗಿ ಅಲಿ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಅಲಿ ಅವರು ಮಣಿಪುರದಿಂದ ಪಾಲ್ಗೊಂಡಿದ್ದರು. ‘ಏಕತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಅತ್ಯಂತ ಮಹತ್ವದ ಈ ಕಾರ್ಯದಲ್ಲಿ ಪಾಲ್ಗೊಳ್ಳದಿದ್ದರೆ ರಾಜಕಾರಣಿಯಾಗಿ ನಿಜವಾಗಿಯೂ ಮಾಡಬೇಕಾದ ಕೆಲಸಗಳಿಂದ ವಿಫಲರಾದಂತೆ’ ಎಂದಿದ್ದಾರೆ.
Honoured to get blessings of epitome of sacrifice, Smt #SoniaGandhi for my 2nd #LokSabhaElection from #Amroha. Her heart beats for India’s poor. It was NAC headed by her that piloted landmark pro-poor & transparency laws like MNREGA, #RTI, Right to Education, Food Security Bill. pic.twitter.com/AAesBjF2FH
— Kunwar Danish Ali (@KDanishAli) March 14, 2024
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.