ಚೆನ್ನೈ: ಸರ್ಕಾರಿ ಸ್ವಾಮ್ಯದ ಪ್ರಸಾರಕ ದೂರದರ್ಶನದ (ಡಿಡಿ) ಲಾಂಛನವನ್ನು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಕೇಸರಿಮಯಗೊಳಿಸುವ ಬಿಜೆಪಿಯ ಪಿತೂರಿಯ ಪೂರ್ವಭಾವಿ ಪ್ರಯತ್ನ ಎಂದು ಅವರು ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ದೂರದರ್ಶನಕ್ಕೆ ‘ಕೇಸರಿ ಕಲೆ’ ನೀಡಲಾಗಿದೆ. ಎಲ್ಲವನ್ನೂ ಕೇಸರಿಮಯಗೊಳಿಸುವ ಬಿಜೆಪಿಯ ಷಡ್ಯಂತ್ರ ಇದು ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿರುವ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ.
உலகப் பொதுமறை தந்த வள்ளுவருக்குக் காவிச்சாயம் பூசினார்கள்;
— M.K.Stalin (@mkstalin) April 21, 2024
தமிழ்நாட்டின் ஆளுமைகளின் சிலைகள் மீது காவி பெயிண்ட் ஊற்றி அவமானப்படுத்தினார்கள்;
வானொலி என்ற தூய தமிழ்ப் பெயரை ஆகாஷவாணி என சமஸ்கிருதமயமாக்கினார்கள்;
பொதிகை என்ற அழகிய தமிழ்ச் சொல்லையும் நீக்கினார்கள்;
தற்போது… pic.twitter.com/o0JU8oEaYE
'ಲಾಂಛನದ ಬಣ್ಣ ಬದಲಾವಣೆಯಂತಹ ಕ್ರಮಗಳು ಕೇಸರಿಕರಣದ ಪೂರ್ವಭಾವಿ ಪ್ರಯತ್ನಕ್ಕೆ ಉದಾಹರಣೆ. 2024ರ ಲೋಕಸಭಾ ಚುನಾವಣಾ ಫಲಿತಾಂಶ ಅಂತಹ ಫ್ಯಾಸಿಸಂ ಶಕ್ತಿಗಳ ವಿರುದ್ಧ ಸಾರ್ವಜನಿಕ ಪ್ರತಿರೋಧವನ್ನು ತೋರಿಸಲಿದೆ' ಎಂದು ಅವರು ಹೇಳಿದ್ದಾರೆ.
ಈ ಹಿಂದೆ ತಮಿಳು ಕವಿ ತಿರುವಳ್ಳುವರ್ ಅವರನ್ನು ಕೇಸರಿಮಯಗೊಳಿಸಲಾಗಿತ್ತು. ತಮಿಳುನಾಡಿನ ಮಹಾನ್ ನಾಯಕರ ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು ಎಂದೂ ಹೇಳಿದ್ದಾರೆ.
ದೂರದರ್ಶನದ ಲಾಂಛನ ಬಣ್ಣ ಬದಲಾವಣೆ ಕಾನೂನುಬಾಹಿರ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಬಣ್ಣ ಬದಲಾವಣೆ ಕುರಿತು ‘ಡಿಡಿ ನ್ಯೂಸ್’ ಏಪ್ರಿಲ್ 16ರಂದು ತನ್ನ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಾಗೂ ವಿಡಿಯೊವೊಂದನ್ನು ಹಂಚಿಕೊಂಡಿತ್ತು.
‘ನಾವೀಗ ಹೊಸ ಅವತಾರದಲ್ಲಿ ಲಭ್ಯ. ಆದರೆ, ನಮ್ಮ ಮೌಲ್ಯಗಳು ಹಾಗೆಯೇ ಇವೆ. ಈ ಹಿಂದೆಂದಿಗಿಂತಲೂ ಭಿನ್ನವಾದ ಸುದ್ದಿಗಳಿಗಾಗಿ ಹೊಸ ಪಯಣಕ್ಕೆ ಸಿದ್ಧರಾಗಿ. ಹೊಸ ರೂಪದಲ್ಲಿ ಡಿಡಿ ನ್ಯೂಸ್ ಪ್ರಸ್ತುತಿ ಅನುಭವಿಸಿ’ ಎಂದು ಪೋಸ್ಟ್ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.