ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರ ವೈಯಕ್ತಿಕ ನಂಬರ್ಗೆ ಕೊಲೆ ಬೆದರಿಕೆ ಒಡ್ಡಿರುವ ಸಂದೇಶವೊಂದು ಬಂದಿದೆ.
‘ನಿಮ್ಮನ್ನು ಕೊಲೆ ಮಾಡುವುದಕ್ಕೆ ನನ್ನ ಮೇಲೆ ಬಲವಾದ ಒತ್ತಡ ಇದೆ. ಅಗತ್ಯಬಿದ್ದರೆ ಪ್ರಧಾನಿಯನ್ನೂ ಕೊಲ್ಲುತ್ತೇನೆ’ ಎಂದು ಅಪರಿಚಿತ ವ್ಯಕ್ತಿ ಸಂದೇಶದಲ್ಲಿ ಹೇಳಿದ್ದಾನೆ.
ಮತ್ತೊಂದು ಸಂದೇಶದಲ್ಲಿ ಕೊಲೆ ಬೆದರಿಕೆ ಒಡ್ಡಿದ್ದಕ್ಕಾಗಿ ಕ್ಷಮೆಯನ್ನೂ ಅಪರಿಚಿತ ಕೇಳಿದ್ದಾನೆ.‘ಕೊಲೆ ಬೆದರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
‘ಬೆದರಿಕೆ ಕುರಿತು ಶ್ರೀಘ್ರದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ದೆಹಲಿಯ ಬಿಜೆಪಿ ಮಾಧ್ಯಮ ಸಂಪರ್ಕ ವಿಭಾಗದ ಮುಖ್ಯಸ್ಥ ನೀಲಕಂಠ್ ಭಕ್ಷಿ ಹೇಳಿದರು.
‘ಶುಕ್ರವಾರ ಮಧ್ಯಾಹ್ನ 12.52ರ ವೇಳೆಗೆ ಸಂದೇಶ ಬಂದಿದ್ದು, ತಿವಾರಿ ಅವರು ಶನಿವಾರ ಸಂಜೆ ಸಂದೇಶ ಓದಿದ್ದಾರೆ. ಓದಿದ ತಕ್ಷಣದಲ್ಲಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ’ ಎಂದು ಅವರು ಹೇಳಿದರು.