ನವದೆಹಲಿ: ದೇಶದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯದ ಕಾರಣ ಬೇಳೆಕಾಳು, ಹತ್ತಿ ಮತ್ತು ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಳೆ ಕೊರತೆಯು ಮುಂಗಾರು ಹಂಗಾಮಿನ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಈ ರಾಜ್ಯಗಳ ರೈತರು ಹೆಚ್ಚಾಗಿ ಎಣ್ಣೆ ಕಾಳು, ಬೇಳೆಕಾಳು, ಹತ್ತಿ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ.
ಸೆಪ್ಟೆಂಬರ್ 1ರ ವರೆಗೆ ಅನಿಯಮಿತ ಮುಂಗಾರು ಮಳೆಯಿಂದಾಗಿ ದ್ವಿದಳ ಧಾನ್ಯಗಳ ಒಟ್ಟು ಬಿತ್ತನೆ ಪ್ರದೇಶವು ಶೇ 8.48 ರಷ್ಟು ಕುಂಠಿತವಾಗಿದ್ದು, ವರ್ಷದಿಂದ ವರ್ಷಕ್ಕೆ ಈ ಬೆಳೆಗಳ ಬಿತ್ತನೆ ಪ್ರದೇಶವು ಕುಂಠಿತವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಳಂಬವಾದ ಬಿತ್ತನೆಯು ಉದ್ದು ಮತ್ತು ಹೆಸರು ಬೆಳೆಗಳ ಕೃಷಿ ಪ್ರದೇಶ ಕುಂಠಿತವಾಗಲು ಕಾರಣವಾಗಿದೆ. ಈ ವರ್ಷ ತೊಗರಿ ಬಿತ್ತನೆ ಪ್ರದೇಶ ಶೇ5.76ರಷ್ಟು, ಉದ್ದಿನ ಬೆಳೆ ಶೇ 13.5ರಷ್ಟು ಮತ್ತು ಹೆಸರು ಬೆಳೆಯ ಬಿತ್ತನೆ ಪ್ರದೇಶ ಶೇ7.7 ರಷ್ಟು ಕುಂಠಿತವಾಗಿದೆ. ಹತ್ತಿ ಬೆಳೆಯುವ ಪ್ರದೇಶ ಶೇ 2ರಷ್ಟು ಮತ್ತು ಎಣ್ಣೆ ಕಾಳು ಬಿತ್ತನೆ ಪ್ರದೇಶ ಶೇ1ರಷ್ಟು ಕುಂಠಿತವಾಗಿದೆ ಎಂದು ವಿವರಿಸಿದ್ದಾರೆ.