ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ದೆಹಲಿ ನ್ಯಾಯಾಲಯ ಮಂಗಳವಾರ ಕಾಯ್ದಿರಿಸಿದೆ.
ಪ್ರಕರಣ ಕುರಿತು ಸಂಜಯ್ ಸಿಂಗ್ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಪರ ವಕೀಲರ ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್ ಅವರು ಡಿ. 21ರಂದು ಆದೇಶ ಪ್ರಕಟಿಸುವುದಾಗಿ ಹೇಳಿದರು.
ಸಂಜಯ್ ಸಿಂಗ್ ಪರವಾಗಿ ಹಿರಿಯ ವಕೀಲ ಮೋಹಿತ್ ಮಾಥೂರ್ ವಾದ ಮಂಡಿಸಿ, ‘ಜಾರಿ ನಿರ್ದೇಶನಾಲಯವು ಅ. 4ರಂದು ಸಂಜಯ್ ಅವರನ್ನು ಬಂಧಿಸಿದೆ. ಆದರೆ ಅದಕ್ಕೂ ಪೂರ್ವದಲ್ಲಿ ವಿಚಾರಣೆಗೆ ಹಾಜರಾಗುವಂತೆ ಒಂದು ಬಾರಿಯೂ ಇಡಿ ನೋಟಿಸ್ ನೀಡಿಲ್ಲ’ ಎಂದರು.
ಪ್ರಕರಣದ ಆರೋಪಿ ದಿನೇಶ್ ಅರೋರಾ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಬದಲಾಗಿದ್ದು, ಈತನ ಹೇಳಿಕೆಯಲ್ಲಿ ಗೊಂದಲಗಳಿವೆ ಎಂದು ಇಡಿ ಪರ ವಕೀಲರು ವಾದಿಸಿದರು.
’ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು. ಜಾಮೀನು ಮಂಜೂರು ಮಾಡಬಾರದು. ಇದರಿಂದ ಸಿಂಗ್ ಅವರು ತನಿಖೆಗೆ ಅಡ್ಡಿಪಡಿಸುವ ಹಾಗೂ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಜತೆಗೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಪಾಯವೂ ಇದೆ, ಹೀಗಾಗಿ ಸಿಂಗ್ ಅವರ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ನ್ಯಾಯಾಲಯವನ್ನು ಮನವಿ ಮಾಡಿಕೊಂಡರು.
ಈ ಕುರಿತಂತೆ ಎರಡು ದಿನಗಳ ಒಳಗಾಗಿ ಲಿಖಿತ ಮನವಿ ಸಲ್ಲಿಸುವಂತೆ ಇಡಿಗೆ ನ್ಯಾಯಾಲಯ ಸೂಚಿಸಿತು. ಜತೆಗೆ ಮರಿಪರಿಶೀಲನಾ ಅರ್ಜಿಯನ್ನು ಒಂದು ದಿನದ ಒಳಗಾಗಿ ಸಲ್ಲಿಸುವಂತೆ ಸಂಜಯ್ ಸಿಂಗ್ ಪರ ವಕೀಲರಿಗೂ ಸೂಚಿಸಿತು.