ನವದೆಹಲಿ : ಇದೇ 15ರಂದು ಜಾಮೀನು ಮಂಜೂರಾಗಿದ್ದ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ, ಜೆಎನ್ಯು ವಿದ್ಯಾರ್ಥಿಗಳಾದದೇವಾಂಗನಾ ಕಾಲಿತಾ ಮತ್ತು ನತಾಶಾ ನರ್ವಾಲ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯ ಆದೇಶಿಸಿರುವುದು ಅತ್ಯುತ್ತಮವಾಗಿದೆ ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ್ ಮತ್ತು ಅನೂಪ್ ಜೈರಾಜ್ ಭಂಭಾನಿ ಅವರ ಪೀಠವು ಗುರುವಾರ ಹೇಳಿದೆ.
ಜಾಮೀನು ದೊರೆತ ವ್ಯಕ್ತಿಗಳನ್ನು ಜೈಲಿನಲ್ಲಿಯೇ ಇರಿಸುವುದಕ್ಕೆ ದಾಖಲೆಗಳ ದೃಢೀಕರಣ ಪ್ರಕ್ರಿಯೆ ವಿಳಂಬವಾಗಿದೆ ಎಂಬುದು ಸಮಂಜಸ ಕಾರಣ ಅಲ್ಲ ಎಂದು ಹೈಕೋರ್ಟ್ ಹೇಳಿದೆ.
ದೆಹಲಿಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿ ಈ ಮೂವರನ್ನು ಕಳೆದ ವರ್ಷದ ಮೇಯಲ್ಲಿ ಬಂಧಿಸಲಾಗಿತ್ತು. ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯ ನೀಡಿದ ಸೂಚನೆಯಂತೆ ಆರೋಪಿಗಳನ್ನುಬಿಡುಗಡೆ ಮಾಡಲಾಯಿತು.
ದೆಹಲಿ ಹೈಕೋರ್ಟ್ ಈ ಮೂವರಿಗೆ ಮಂಗಳವಾರವೇ ಜಾಮೀನು ಮಂಜೂರು ಮಾಡಿತ್ತು. ಆದರೆ, ಆರೋಪಿಗಳ ವಿಳಾಸ ಮತ್ತು ಭದ್ರತಾ ಖಾತರಿಯ ಪರಿಶೀಲನೆ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕೆ ಬಿಡುಗಡೆ ವಿಳಂಬವಾಗಿತ್ತು.
ಹಾಗಾಗಿ, ತಕ್ಷಣವೇ ಬಿಡುಗಡೆಗೆ ಆದೇಶಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಆರೋಪಿಗಳು ಬುಧವಾರ ಮನವಿ ಮಾಡಿಕೊಂಡಿದ್ದರು. ವಿಚಾರಣಾ ನ್ಯಾಯಾಲಯವು ಈ ಮನವಿಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ ಕಾರಣ, ಆರೋಪಿಗಳು ಹೈಕೋರ್ಟ್ಗೆ ಅರ್ಜಿ ಹಾಕಿದ್ದರು.
‘ಭಿನ್ನಮತವನ್ನು ದಮನಿಸುವ ಕಾತರದಲ್ಲಿ ಪ್ರಭುತ್ವವು ಪ್ರತಿಭಟನೆ ಮತ್ತು ಭಯೋತ್ಪಾದನಾ ಚಟುವಟಿಕೆಯ ನಡುವಣ ಗೆರೆಯನ್ನು ಮಸುಕಾಗಿಸಿದೆ’ ಎಂದು ಹೈಕೋರ್ಟ್, ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ಹೇಳಿತ್ತು.ಆರೋಪಿಗಳ ಅರ್ಜಿಗೆ ಸಂಬಂಧಿಸಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಗುರುವಾರ ಬೆಳಿಗ್ಗೆ ಸೂಚಿಸಿತ್ತು.
‘ಸುಪ್ರೀಂ’ ವಿಚಾರಣೆ ಇಂದು
ದೇವಾಂಗನಾ ಕಾಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ.