ಮೆಟ್ರೊ ರೈಲು ನಿಲ್ದಾಣಗಳಿಗೆ ಆಯಾ ಪರಿಸರದ ಹೆಸರನ್ನು ಬಿಟ್ಟು ಇತರ ಹೆಸರನ್ನು ಇಡುವ ಸಂಪ್ರದಾಯ ಆರಂಭದಲ್ಲಿ ಇರಲಿಲ್ಲ. ಆದರೆ ಸಂಘದ ಸಮುಚ್ಛಯದ ಪಕ್ಕದಲ್ಲಿಯೇ ಹಾದುಹೋಗುವ ನಿಲ್ದಾಣಕ್ಕೆ ದೆಹಲಿ ಕರ್ನಾಟಕ ಸಂಘ ನಿಲ್ದಾಣ ಎಂಬ ಹೆಸರಿಡಬೇಕು ಎಂದು ಒತ್ತಾಯಿಸಲಾಗಿತ್ತು. ಸಂಘದ ಹೆಸರು ಅಲ್ಲದಿದ್ದರೆ, ಕನ್ನಡಿಗ ಸಾಧಕನೊಬ್ಬನ ಹೆಸರನ್ನು ಇಡಬೇಕು ಎಂದು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮೂಲಕ 2013ರಲ್ಲಿ ಅಂದಿನ ಕೇಂದ್ರ ನಗರಾಡಳಿತ ಸಚಿವ ಕಮಲ್ನಾಥ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಬದಲಾದ ನಂತರ ಪುನಃ ಅಂದಿನ ನಗರಾಡಳಿತ ಸಚಿವ ವೆಂಕಯ್ಯ ನಾಯ್ಡು ಅವರ ಮೇಲೆ ಒತ್ತಡ ತರಲಾಯಿತು..