‘ಪಕ್ಷಕ್ಕೆ ಸೇರುವಂತೆ ನನ್ನ ಆಪ್ತ ವ್ಯಕ್ತಿಯೊಬ್ಬರ ಮೂಲಕ ಬಿಜೆಪಿ ನನ್ನನ್ನು ಸಂಪರ್ಕಿಸಿದೆ. ಪಕ್ಷಕ್ಕೆ ಸೇರ್ಪಡೆಗೊಳ್ಳದಿದ್ದರೆ ಒಂದು ತಿಂಗಳೊಳಗೆ ಇ.ಡಿಯಿಂದ ಬಂಧನಕ್ಕೊಳಗಾಗಲು ಸಿದ್ಧರಾಗಿ ಎಂದು ಹೇಳಿದೆ’ ಎಂದು ದೆಹಲಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಅತಿಶಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಾರ್ಖಂಡ್ ಬಿಜೆಪಿಯ ರಾಜ್ಯಸಭಾ ಸಂಸದ ಆದಿತ್ಯ ಸಾಹು, ‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜನರು ಕಷ್ಟಪಟ್ಟು ದುಡಿದ ಹಣವನ್ನು ಎಎಪಿ ನಾಯಕರು ಲೂಟಿ ಮಾಡಿದ್ದಾರೆ. ಈಗ ಮೊಸಳೆ ಕಣ್ಣೀರು ಸುರಿಸುತ್ತ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತಮ್ಮ ನಿವಾಸ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಿದೆ. ಬಳಿಕ ಸಮನ್ಸ್ ನೀಡಲಿದೆ. ನನ್ನನ್ನೂ ಸೇರಿದಂತೆ ದೆಹಲಿ ಸಚಿವ ಸೌರಭ್ ಭಾರದ್ವಾಜ್, ಶಾಸಕ ದುರ್ಗೇಶ್ ಪಾಠಕ್ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಇ.ಡಿ ಬಂಧಿಸಲಿದೆ ಎಂದು ಅತಿಶಿ ಆರೋಪಿಸಿದ್ದಾರೆ.