ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ಅಸ್ಸಾಂನಲ್ಲಿ ಸ್ಫೋಟ ನಡೆಸುವ ಸಂಚು ಭೇದಿಸಿರುವ ದೆಹಲಿಯ ಪೊಲೀಸರು, ಅಸ್ಸಾಂನ ಮೂವರನ್ನು ಬಂಧಿಸಿದ್ದಾರೆ. ಅವರಿಂದ ಸುಧಾರಿತ ಸ್ಫೋಟಕ ಪರಿಕರಗಳನ್ನು (ಐಇಡಿ) ವಶಪಡಿಸಿಕೊಂಡಿದ್ದಾರೆ.
‘20ಕ್ಕಿಂತ ಕಡಿಮೆ ವಯಸ್ಸಿನ ಮುಖಾದಿರ್ ಇಸ್ಲಾಂ, ರಂಜೀತ್ ಅಲಿ ಹಾಗೂ ಜಮೀಲ್ ಲೂತಿ ಬಂಧಿತರು. ಇವರು ಐ.ಎಸ್ ಸಂಘಟನೆಯಿಂದ ಪ್ರೇರಣೆಗೊಂಡಿದ್ದರು. ಅಸ್ಸಾಂ– ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ವಿಭಾಗ) ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ಇವರು ಅಸ್ಸಾಂನ ಗೋಪಾಲಪುರ ಜಿಲ್ಲೆಯ ದುದ್ನೋಯಿ ಗ್ರಾಮದಲ್ಲಿ 14 ದಿನಗಳ ರಾಮ್ಲೀಲಾ ಉತ್ಸವದ ಕಡೆಯ ದಿನವಾದ ಸೋಮವಾರ ಹಾಗೂ ದೆಹಲಿಯಲ್ಲಿ ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಕುಶ್ವಾಹ ತಿಳಿಸಿದ್ದಾರೆ.