ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಹಿಂಸಾಚಾರವನ್ನು ನಿಭಾಯಿಸಿದ ರೀತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ದೆಹಲಿ ಪೊಲೀಸರಿಗೆ ಬುಧವಾರ ಛೀಮಾರಿ ಹಾಕಿದೆ.
‘ಈ ರೀತಿ ಹಿಂಸಾಕೃತ್ಯಗಳು ನಡೆದಿರುವುದು ದುರದೃಷ್ಟಕರ. ಇಂತಹ ಕೃತ್ಯಗಳು ಘಟಿಸಲು ಪೊಲೀಸರು ಅವಕಾಶವನ್ನೇ ನೀಡಬಾರದಿತ್ತು’ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಕೆ.ಎಂ.ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.
‘ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಯಾರೋ ಒಬ್ಬರು ಪ್ರಚೋದನಕಾರಿಯಾಗಿ ಮಾತನಾಡುತ್ತಿರುವಾಗ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಬೇಕಿತ್ತು. ಇದಕ್ಕಾಗಿ ಮೇಲಧಿಕಾರಿಗಳಿಂದ ಆದೇಶ ಬರಲಿ ಎಂದು ಕಾಯುವ ಅಗತ್ಯವಿರಲಿಲ್ಲ’ ಎಂದು ನ್ಯಾಯಪೀಠ ಹೇಳಿತು.
ವೈಫಲ್ಯ: ದೆಹಲಿ ಪೊಲೀಸರ ವೈಫಲ್ಯದಿಂದಾಗಿಯೇ ಹಿಂಸಾಚಾರ ಸಂಭವಿಸಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
‘ಹಿಂಸಾಕೃತ್ಯ ಪೂರ್ವದೆಹಲಿಯಲ್ಲಿ ಭುಗಿಲೆದ್ದಿರಲಿ ಇಲ್ಲವೇ ಹಠಾತ್ ಆಗಿರಲಿ, ಅದನ್ನು ಶಮನ ಮಾಡುವುದು ಸರ್ಕಾರದ ಕರ್ತವ್ಯ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.