ನವದೆಹಲಿ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ 4.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದರ ಪರಿಣಾಮವೆಂಬಂತೆ ದೆಹಲಿ-ಎನ್ಸಿಆರ್ನಲ್ಲೂ ನಡುಕ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.2ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ರಾಜಸ್ಥಾನದ ಅಲ್ವಾರ್ ಎಂಬುದನ್ನು ಎನ್ಸಿಎಸ್ ಖಚಿತಪಡಿಸಿದೆ.
ರಾತ್ರಿ 11.46ಕ್ಕೆ ಸರಿಯಾಗಿ ಐದು ಕಿಲೋಮೀಟರ್ ಆಳದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವಿವರಣೆ ನೀಡಿದೆ.
ಭೂಕಂಪದ ತೀವ್ರತೆಯಿಂದಾಗಿ ದೆಹಲಿ-ಎನ್ಸಿಆರ್ ಹಲವು ಭಾಗಗಳಲ್ಲಿ ನಡುಕ ಅನುಭವವಾಗಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.